Tuesday 31 May 2016

ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ- ಒಂದು ನೆನಪು

ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ- ಒಂದು ನೆನಪು
ದಿ. ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟರು ವಿಧಿವಶರಾಗಿ ಇಂದಿಗೆ ಎರಡು ವರ್ಷಗಳು ಸಂದಿತು .( ೨೨.೦೩.೧೪ ರಂದು ನಿಧನ ಹೊಂದಿದ್ದರು ) ಅವರ ನೆನಪಿಗಾಗಿ ಈ ಕಿರು ಬರಹ .

ದಿ. ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ ಯಕ್ಷಮಾತೆ ಹೆತ್ತ ಅನರ್ಘ್ಯ ರತ್ನಗಳಲ್ಲೊಂದು. ಪ್ರಸಿಧ್ಧಿಯ ಉತ್ತುಂಗ ಶಿಖರದಲ್ಲಿರುವಾಗಲೇ ಅಗಲಿದುದು ನಿಜಾರ್ಥದಲ್ಲಿಯೇ ಯಕ್ಷರಂಗಕ್ಕಾದ ದೊಡ್ಡ ನಷ್ಟ . ಅಸ್ಖಲಿತ
ಮಾತುಗಾರಿಕೆ , ಸ್ಪಷ್ಟೋಚ್ಛಾರದ ವಾಕ್ಯಗಳ ಚೆಲುವಿಕೆ, ಭಾವಾರ್ಥ , ಶಬ್ದಾರ್ಥಗಳ ವಿವರಣೆಯೊಂದಿಗೆ ಸಂಸ್ಕ್ರತ ಶ್ಲೋಕಗಳ ಬಳಕೆ, ಜೈಮಿನಿಭಾರತ ಹಾಗೂ ಪ್ರಸಿಧ್ಧ ಕವಿವರೇಣ್ಯರ ಸಾಹಿತ್ಯವನ್ನು ಸಂದರ್ಬೋಚಿತವಾಗಿ ಉಲ್ಲೇಖಿಸುವ ಕುಶಲಗಾರಿಕೆ ಇದೆಲ್ಲಾ ಮೇಳೈಸಿದರೆ
" ಚೆನ್ನಪ್ಪ ಶೆಟ್ಟರ ಅರ್ಥಗಾರಿಕೆ "
ಆಗುತ್ತದೆ . ಆದರೆ ಇದೆಲ್ಲಾ ಈಗ ಕೇವಲ ನೆನಪು ಮಾತ್ರ .
ರಾಯಿ ವಾಸುಶೆಟ್ಟಿ - ಲಿಂಗಮ್ಮ ದಂಪತಿಗಳ ಸುಪುತ್ರರಾಗಿ ೧೯೫೨ರಲ್ಲಿ ಜನಿಸಿದ ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟರು ಕೃಷಿಕ
ಕುಟುಂಬದವರು. ಯಕ್ಷಗಾನದತ್ತ ಆಕರ್ಷಿತರಾದ ಶೆಟ್ಟರು ತಮ್ಮ ೧೨ ನೇ ವಯಸ್ಸಿನಲ್ಲಿ ಶಾಲೆ ಬಿಟ್ಟು ಸಿದ್ದಕಟ್ಟೆಯ ಪ್ರಸಿಧ್ದ ಅರ್ಥಧಾರಿ, ತಮ್ಮ ಬಂಧುಗಳಾದ ಕುತ್ಲೋಡಿ ವಾಸುಶೆಟ್ಟರ
ಬಳಿ ಯಕ್ಷಗಾನದ ಪ್ರಾಥಮಿಕ ಹೆಜ್ಜೆಗಳನ್ನು ಕಲಿತರು. ಮುಂದೆ ಧರ್ಮಸ್ತಳ ಕೇಂದ್ರಕ್ಕೆ ಸೇರಿ ಕುರಿಯ ವಿಠಲ ಶಾಸ್ತ್ರಿ ಹಾಗೂ ಪಡ್ರೆ ಚಂದುರವರಲ್ಲಿ ಶಿಷ್ಯತ್ವ ಸ್ವೀಕರಿಸಿದರು.ಅರ್ಥಗಾರಿಕೆಯಲ್ಲಿ ಕಾಂತ ರೈ ಮೂಡಬಿದಿರೆ ಹಾಗೂ ವಾಸುಶೆಟ್ಟರಲ್ಲಿ ಅನುಭವ ಪಡೆದರು.ಕೊರ್ಗಿಯವರ ಸಂಪರ್ಕದಿಂದ ಮಾತುಗಾರಿಕೆಯ ಪಾಂಡಿತ್ಯ ಪಡೆದರು. ಬಡಗಿನ ನಾಟ್ಯವನ್ನು ಹೆರಂಜಾಲು ವೆಂಕಟರಮಣ ಗಾಣಿಗ ಹಾಗೂ ರಾಮ ನಾಯಿರಿಯವರಿಂದ ಕಲಿತರು. ಮಲ್ಲ ಮೇಳ, ಕಟೀಲು, ಧರ್ಮಸ್ತಳ ,ಬಪ್ಪನಾಡು , ಮಧೂರು , ಕದ್ರಿ , ಬಡಗಿನ ಪೆರ್ಡೂರು, ಸಾಲಿಗ್ರಾಮ ಮುಂತಾದ ಮೇಳಗಳಲ್ಲಿ ದುಡಿದು ಕೊನೆಗಾಲದಲ್ಲಿ ತೆಂಕುತಿಟ್ಟಿನ ಸುಪ್ರಸಿಧ್ಧ ಹೊಸನಗರ ಮೇಳದ ಪ್ರಧಾನ ಕಲಾವಿದರಾಗಿದ್ದರು.
ಚೆನ್ನಪ್ಪ ಶೆಟ್ಟರು ಉತ್ತಮ ಅಂಗ ಸೌಷ್ಟವದ , ನೇರ ಮಾತಿನ, ಯಾವದೇ ದುಶ್ಚಟ ಹೊಂದಿಲ್ಲದ ಅಪರೂಪದ ಕಲಾವಿದರು . ಆರೋಗ್ಯದ ಕುರಿತಾಗಿ ಅಪಾರ ಕಾಳಜಿ ಉಳ್ಳವರು .ಯಾವದೇ ಪಾತ್ರ ನಿರ್ವಹಿಸಲು ಬೇಕಾದ ಸುಂದರ ರೂಪ ಉಳ್ಳವರು. ನೋಡಲು ಗಂಭೀರವಾಗಿ ಕಾಣುತ್ತಾರಾದರೂ , ತಮಾಷೆ ಸ್ವಭಾವ ಉಳ್ಳವರು ಎಂದು ಹೆಚ್ಚಾಗಿ ಯಾರಿಗೂ ತಿಳಿದಿಲ್ಲ. ತಮ್ಮ ಆಪ್ತವಲಯದ ಸ್ನೇಹಿತರಲ್ಲಿ ಮಾತ್ರ ವಿನೋದ ಪ್ರವೃತ್ತಿಯ ಗುಣ ತೋರ್ಪಡಿಸುತ್ತಿದ್ದರು. ಶೃಂಗಾರ , ಕರುಣ, ವೀರ ರಸಗಳನ್ನು ರಂಗದಲ್ಲಿ ಪರಿಣಾಮಕಾರಿಯಾಗಿ ಅಬಿವ್ಯಕ್ತಪಡಿಸುತ್ತಿದ್ದ ಶೆಟ್ಟರು ಹಾಸ್ಯ ರಸವನ್ನೂ ಅಷ್ಟೇ ಚೆನ್ನಾಗಿ ಪೋಷಣೆ ಮಾಡುತ್ತಿದ್ದರು. ಹಾಸ್ಯಗಾರರ ಪಾತ್ರಕ್ಕೆ
ಸ್ಪಂದಿಸುತ್ತಿದ್ದರು. ಸುಪ್ರಸಿಧ್ಧ ಹಾಸ್ಯ ಪಾತ್ರಧಾರಿ ಸೀತಾರಾಮ ಕುಮಾರರು ಹೇಳುವಂತೆ ,ಅವರ ಹಾಸ್ಯಕ್ಕೆ ಸಾಹಿತ್ಯ ಒದಗಿಸುತ್ತಿದ್ದುದು ಚೆನ್ನಪ್ಪ ಶೆಟ್ಟರೇ.
" ಶನೀಶ್ವರ ಮಹಾತ್ಮೆ " ಯ ಶೆಟ್ಟರ ವಿಕ್ರಮಾದಿತ್ಯನ ಎದುರು ಸೀತಾರಾಮರ " ಸಾಯಿಬ " ,
" ನಾಗವಲ್ಲಿ " ಯ ಮಂತ್ರವಾದಿ ,
" ಚಂದ್ರಾವಳಿ " ಯ ಚಂದಗೋಪ ಇತ್ಯಾದಿ ಪಾತ್ರಗಳು ಶೆಟ್ಟರಿಂದಾಗಿ ಸೀತಾರಾಮರಿಗೆ ಅಪಾರ ಪ್ರಸಿಧ್ಧಿ ತಂದು ಕೊಟ್ಟಿದ್ದವು. ಸೂಕ್ಷ್ಮಜೀವಿಯಾದ ಶೆಟ್ಟರು , ತಮ್ಮನ್ನು ಯಾರಾದರೂ ವಿನಾಕಾರಣ ನಿಂದಿಸಿದರೆ ಅಥವಾ ಅಗೌರವ ತೋರಿದರೆ ತುಂಬಾ ನೊಂದುಕೊಳ್ಳುತ್ತಿದ್ದರು . ಇದನ್ನೆಲ್ಲಾ ಬೇಸರದಿಂದ ನನ್ನಲ್ಲಿ ಹೇಳುವಾಗ, ಎಷ್ಟೋ ಸಲ ನಾನೇ ಸಮಾಧಾನ ಪಡಿಸಿದ್ದೆ . ತಮ್ಮ ಶುಧ್ಧ , ನಿರ್ಮಲ ವ್ಯಕ್ತಿತ್ವದ ಜೀವಮಾನದಲ್ಲಿ ಒಬ್ಬರಿಂದಲೂ ಧನ ಸಹಾಯ ಯಾಚಿಸಿದವರಲ್ಲ , ಸಹಾಯಾರ್ಥ ಯಕ್ಷಗಾನ ಆಡಿಸಿದವರೂ ಅಲ್ಲ .
ತಂಬಾ ಸ್ವಾಭಿಮಾನಿಗಳು .
ಚೆನ್ನಪ್ಪ ಶೆಟ್ಟರೊಂದಿಗೆ ನನ್ನ ಮಿತ್ರತ್ವ ಸುಮಾರು ೨೫ ವರ್ಷಗಳಿಂದ .
ಕಟೀಲು ಮೇಳದಲ್ಲಿರುವಾಗ ಶೆಟ್ಟರ ಜಾಬಾಲಿ, ಬೃಹ್ಮ , ಚಂಡ, ವಿಶ್ವಾಮಿತ್ರ , ಅರ್ಜುನ, ಕರ್ಣ, ಋತುಪರ್ಣ ಮುಂತಾದ ಪಾತ್ರಗಳನ್ನು ನಾನು ತುಂಬಾ ನೋಡಿದ್ದರೂ, ಆ ಕಾಲದಲ್ಲಿ ನನಗೆ ಶೆಟ್ಟರನ್ನು ಮಾತಾಡಿಸುವಷ್ಟು ಸಲುಗೆಯಿರಲಿಲ್ಲ .ಅವರು ಕರ್ನೂರು ಕೊರಗಪ್ಪ ರೈಗಳ ಕದ್ರಿ ಮೇಳ ಸೇರಿದ ನಂತರವೇ ನನಗೆ ಶೆಟ್ಟರೊಂದಿಗೆ ಮಿತ್ರತ್ವ ಬೆಳೆದದ್ದು . ಆ ಕಾಲದಲ್ಲೇ ಶೆಟ್ಟರು ಅರ್ಥಗಾರಿಕೆಯಲ್ಲಿ ಪ್ರಭುತ್ವ ಸಾಧಿಸಿದ್ದರು. ಆಗ ನಾನು ಪತ್ರಿಕೆಯಲ್ಲಿ
" ಸಿಧ್ದಿ ಇದ್ದೂ , ಪ್ರಸಿಧ್ಧಿ ಹೊಂದದ ಕಲಾವಿದರು "
ಎಂಬ ಶೀರ್ಷಿಕೆಯಲ್ಲಿ ಲೇಖನ ಬರೆದಿದ್ದೆ. ಅದರಲ್ಲಿ ಏಳೆಂಟು ಕಲಾವಿದರ ಪರಿಚಯ ಮಾಡಿ, ಶೆಟ್ಟರನ್ನು ವಿಶೇಷವಾಗಿ ಉಲ್ಲೇಖಿಸಿದ್ದೆ . ಶೆಟ್ಟರು ಆ ಲೇಖನ ಓದಿ , ಕರ್ನೂರರ ಮೂಲಕ ನನ್ನ ಪರಿಚಯ ಮಾಡಿಕೊಂಡರು. ಅಲ್ಲಿಂದ ನಮ್ಮ ಮಿತ್ರತ್ವ ಬೆಳೆಯಿತು. ಅವರ ವೈಯುಕ್ತಿಕ ಸಮಸ್ಯೆಗಳನ್ನು ನನ್ನಲ್ಲಿ ಹೇಳುವಷ್ಟು ನಮ್ಮ ಮಿತ್ರತ್ವ ಗಟ್ಟಿಯಾಯಿತು .ಶೆಟ್ಟರು ಆ ಕಾಲದಲ್ಲಿ ಸುಪ್ರಸಿಧ್ಧ ಅರ್ಥಧಾರಿಗಳಾಗಿದ್ದರೂ, ಪೂರ್ಣಮಟ್ಟದ " ದೊಡ್ಡ ಕೂಟ " ಗಳಲ್ಲಿ
ಗುರುತಿಸಿಕೊಂಡಿರಲಿಲ್ಲ. ನಾನೊಮ್ಮೆ ಅವರಿಗೆ " ಶೇಣಿ " ಯವರ ಮಾಗಧನಿಗೆ ಭೀಮನ ಪಾತ್ರ ಕೊಟ್ಟೆ . ಅಲ್ಲಿಂದ ಶೆಟ್ಟರು ಹಿಂದೆ ನೋಡಿದ್ದೇ ಇಲ್ಲ.ಹಲವಾರು ದೊಡ್ಡ ಕೂಟಗಳಿಗೆ ಬೇಡಿಕೆ ಪಡೆದುಕೊಂಡರು. ಕೆಲವೇ ವರ್ಷಗಳಲ್ಲೇ ಅತ್ಯಂತ ಬೇಡಿಕೆಯ ಕಲಾವಿದರೆಂದು ಗುರುತಿಸಲ್ಪಟ್ಟರು. ತಾಳಮದ್ದಳೆಗೆ " ಅನಿವಾರ್ಯ ಕಲಾವಿದ " ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಚೆನ್ನಪ್ಪ ಶೆಟ್ಟರು ಕಲಿತದ್ದು ಕೇವಲ ೫ ನೇ ತರಗತಿ ಎಂಬುದನ್ನು ಯಾರೂ ನಂಬಲು ಸಾಧ್ಯವಿಲ್ಲ. ನಿರರ್ಗಳವಾಗಿ ಸಂಸ್ಕ್ರತ ಶ್ಲೋಕಗಳನ್ನು ಹೇಳುವಾಗ ಶೆಟ್ಟರು ಪದವೀದರರಿರಬಹುದೆಂದು ಅನಿಸುತ್ತದೆ . ಈ ಬಗ್ಗೆ ನಾನು ಶೆಟ್ಟರಲ್ಲೇ ಹೇಳಿದಾಗ ಅವರು ನಕ್ಕು ಹೇಳಿದ್ದು.
" ಕುಡ್ವರೇ , ನಾನು ವಿಶ್ವವಿದ್ಯಾಲಯದಲ್ಲಿ ಕಲಿತವನಲ್ಲ.
ಆದರೂ " ವಿಶ್ವ " ಎಂಬ
"ವಿದ್ಯಾಲಯ " ದಿಂದ ಬೇಕಾದಷ್ಟು ಕಲಿತಿದ್ದೇನೆ "
ಎಂಥಹಾ ಮಾರ್ಮಿಕವಾದ ಮಾತು! !

ಯೌವನದ ಕಾಲದಲ್ಲಿ ಶೆಟ್ಟರು ಎದುರು ಕಲಾವಿದರನ್ನು ಸ್ವಲ್ಪ ಮಟ್ಟಿಗೆ
" ಕೆಣಕುವ " ಸ್ವಭಾವ ಹೊಂದಿದ್ದರು. ಸಹ ಕಲಾವಿದರು ಪೂರ್ವತಯಾರಿಯೊಂದಿಗೆ ರಂಗಕ್ಕೆ ಬರಬೇಕೆಂಬ ಉದ್ದೇಶದಿಂದ ಈ ರೀತಿ ಮಾಡುತ್ತಿದ್ದರೇ ಹೊರತು, ಅವರನ್ನು ಅವಮಾನ ಪಡಿಸುವದಕ್ಕಾಗಿರಲಿಲ್ಲ.
( ಪತ್ರಿಕಾ ಸಂದರ್ಶನ ಒಂದರಲ್ಲಿ ಶೆಟ್ಟರು ಈ ರೀತಿ ಹೇಳಿದ್ದರು )
" ಯಕ್ಷರಂಗದ ಭೀಷ್ಮ " ಎಂದೇ ಖ್ಯಾತರಾದ ಡಾ| ಶೇಣಿ ಗೋಪಾಲಕೃಷ್ಣ
ಭಟ್ಟರಿಗೂ , ಚೆ. ಶೆಟ್ಟರಿಗೂ ಭಾರೀ ವಾದವಾಗಿತ್ತು ಎಂದು ಆ ಕಾಲದಲ್ಲಿ ಭಾರೀ ಪ್ರಚಾರದಲ್ಲಿತ್ತು . ಆದರೆ ಯಾವ ಪ್ರಸಂಗದಲ್ಲಿ ಎಂದು ಯಾರಿಗೂ ತಿಳಿದಿರಲಿಲ್ಲ. ನಾನು ಶೆಟ್ಟರಲ್ಲೇ ಈ ಬಗ್ಗೆ ವಿಚಾರಿಸಿದೆ. ಆಗ ಶೆಟ್ಟರು
" ಕುಡ್ವರೇ , ಅಂಥಹದೇನೂ ನಡೆದಿಲ್ಲ. ಇದೆಲ್ಲಾ ಅಂತೆಕಂತೆಗಳು. ಪಾರಿಜಾತ ಪ್ರಸಂಗದಲ್ಲಿ ನಾನು ಶ್ರೀಕೃಷ್ಣನಾಗಿ ರುಕ್ಮಿಣಿಯೊಂದಿಗಿರುವ ಸಂದರ್ಭ. ಶೇಣಿಯವರ ನಾರದ. ನಾನು ದಂಪತಿಗಳು ಒಟ್ಟಿಗಿರುವಾಗ ಬೃಹ್ಮಚಾರಿಗಳು ಬರಬಹುದೇ ಎಂದು ಕೇಳಿದ್ದೆ. ಅದಕ್ಕೆ ಶೇಣಿಯವರು " ಇದು ಯಾವ ಶಾಸ್ತ್ರದಲ್ಲುಂಟು ? ಬಂದಲ್ಲಿ ಏನೂ ತಪ್ಪಿಲ್ಲ " ಎಂದು ಸುಂದರವಾಗಿ ವಿವರಣೆ ಕೊಟ್ಟಿದ್ದರು .
ಅಷ್ಟೇ ಹೊರತು ಬೇರೇನೂ ಇಲ್ಲ . ಶೇಣಿಯವರಂಥಹ ವಿದ್ವಾಂಸರಲ್ಲಿ ನಾನು ವಾದ ಮಾಡಲಿಕ್ಕುಂಟೇ ? " ಎಂದು ಹೇಳಿದ್ದರು .
ಚೆನ್ನಪ್ಪ ಶೆಟ್ಟರು ಗರಿಗರಿಯಾದ ಫೈರನ್ ಧರಿಸಿ , ಹೆಗಲಲ್ಲಿ ಶಲ್ಯ ಧರಿಸಿ , ಹಸನ್ಮುಖರಾಗಿ ಅರ್ಥಗಾರಿಕೆಗೆ ಕುಳಿತುಕೊಳ್ಳುವದನ್ನು ನೋಡುವದೇ ಆನಂದ . ತಮ್ಮ ಪಾತ್ರ ಯಾವದೇ ಆಗಿರಲಿ , ಪೂರ್ವ ತಯಾರಿಯೊಂದಿಗೆ ಬರುವದು ಶೆಟ್ಟರ ಕ್ರಮ. ಅರ್ಥಕ್ಕೆ ಕುಳಿತುಕೊಳ್ಳುವ ಒಂದು ಘಂಟೆಗೆ ಮೊದಲೇ ಪಾತ್ರದಲ್ಲಿ ತಾದ್ಯಾತ್ಮ ಹೊಂದುತ್ತಿದ್ದರು . ಈ ಸಮಯ ಶೆಟ್ಟರು ಯಾರಲ್ಲೂ ಮಾತಾಡುವದೇ ಇಲ್ಲ. ಪರಿಚಯಸ್ತರಿಗೆ ಕೇವಲ ಮುಗುಳ್ನಕ್ಕು ನಮಸ್ಕರಿಸುವದು ಮಾತ್ರ. ಶೆಟ್ಟರು ತಮ್ಮ ಅಂದಿನ ಪಾತ್ರದಲ್ಲೇ
" ಮುಳುಗಿರುತ್ತಾರೆ " ತಮ್ಮ ಎದುರಾಳಿ ಕಲಾವಿದರನ್ನು ಗೌರವಿಸುವ ಶೆಟ್ಟರು , ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುವ ಜಾಯಮಾನದವರು.ಇತ್ತೀಚೆಗೆ ತಾಳಮದ್ದಳೆಯಲ್ಲೂ ಒಂದು ರೀತಿಯ "ಹೊಂದಾಣಿಕೆ " ಬೆಳೆದು ಬಂದಿದೆ.
( ಕ್ರೀಡೆಯಲ್ಲಿ " Match fixing " ಇದ್ದಂತೆ ತಾಳಮದ್ದಳೆಯಲ್ಲೂ ಇಂತಿಷ್ಟೇ ಮಾತಾಡುವ ಹೊಂದಾಣಿಕೆ)
ಆದರೆ , ಶೆಟ್ಟರು ಇಂಥಹ ಹೊಂದಾಣಿಕೆ ಮಾಡುವವರಲ್ಲ. ವಾದಕ್ಕೆ ಪ್ರತಿವಾದ , ಮಂಡನೆಗೆ ಖಂಡನೆ ಮಾಡುವವರು. ಹಾಗೆಂದು ಸೋಲಬೇಕಾದ ಪಾತ್ರಗಳು
ಸೋಲಲೇಬೇಕು ಎಂದು ಪ್ರತಿಪಾದಿಸುವವರು . ಪಾತ್ರಗಳು ಗೆಲ್ಲಬೇಕೇ ಹೊರತು ಪಾತ್ರಧಾರಿಗಳು ಗೆಲ್ಲಕೂಡದು ಎಂದು ಯಾವಾಗಲೂ ಹೇಳುತ್ತಿದ್ದರು .ಹಾಗಾಗಿಯೇ ಶೆಟ್ಟರು ಕೂಟಗಳಿಗೆ ಬೇಕೇ ಎಂದು ಸಂಘಟಕರು ಹಂಬಲಿಸುವದು.
ಶೆಟ್ಟರ ಅರ್ಥಗಾರಿಕೆಯಲ್ಲಿ ಶೇಣಿಯವರ ಗಾಂಭೀರ್ಯ , ರಾ.ಸಾಮಗರ ವ್ಯಾಕರಣಬಧ್ಧ
ಸಾಹಿತ್ಯ , ತೆಕ್ಕಟ್ಟೆ - ಕೊರ್ಗಿಯವರ ವೈಚಾರಿಕತೆ , ಅಳಿಕೆಯವರ ಗತ್ತು ಎಲ್ಲಾ ಮೇಳೈಸಿತ್ತು. ಅರ್ಥಗಾರಿಕೆಯಲ್ಲಿ ಸ್ವಲ್ಪ ಮಟ್ಟಿಗೆ ಶೇಣಿಯವರ ಛಾಯೆಯಿತ್ತು .
ಹಾಗೆಂದು ಯಾರದ್ದೂ ಅನುಕರಣೆ ಇರಲಿಲ್ಲ ಎಂಬುದು ವಾಸ್ತವ.
ಶೆಟ್ಟರ ಸ್ಮರಣಶಕ್ತಿ ಅದ್ಭುತ . ಮೂಡಬಿದಿರೆಯಲ್ಲಿ ನಮ್ಮ
" ಯಕ್ಷಸಂಗಮ " ದವರಿಂದ ಜರಗಿದ
" ಭೀಷ್ಮಪರ್ವ " ಪ್ರಸಂಗ.ಶೆಟ್ಟರ ಕೌರವ
ಹಿರಿಯ , ಪ್ರಸಿಧ್ಧ ಅರ್ಥಧಾರಿಗಳ ಭೀಷ್ಮ .ಅಂದು ಶೆಟ್ಟರಿಗೂ , ಆ ಹಿರಿಯ ಅರ್ಥಧಾರಿಗಳಿಗೂ ಸ್ವಲ್ಪ ಬಿಸಿಬಿಸಿ ಚರ್ಚೆಯಾಗಿತ್ತು . ಇದರಿಂದ ಆ ಹಿರಿಯ ಅರ್ಥಧಾರಿಗಳು " ಇನ್ನು ಮುಂದೆ ಚೆ. ಶೆಟ್ಟರ ಎದುರು ಅರ್ಥ ಹೇಳುವದಿಲ್ಲ " ಎಂದರು. ನನ್ನಲ್ಲೂ ಹಾಗೇ ತಿಳಿಸಿದ್ದರು. ಆ ಹಿರಿಯ ಅರ್ಥಧಾರಿಗಳೂ ಸಜ್ಜನರು, ಹೃದಯ ವೈಶಾಲ್ಯವನ್ನು ಹೊಂದಿದವರು . ಆದರೂ ಏನೋ ವಿಷಘಳಿಗೆಯಿರಬೇಕು,
ಅಂಥಹ ಘಟನೆ ನಡೆಯಿತು. ನಾನು ಈ ವಿಷಯ ಶೆಟ್ಟರಲ್ಲಿ ತಿಳಿಸಿರಲಿಲ್ಲ. ಆದರೂ ಶೆಟ್ಟರಿಗೆ ಬೇರೆಯವರ ಮೂಲಕ ಈ ವಿಷಯ ತಿಳಿಯಿತೇನೋ ?ಎರಡು ತಿಂಗಳ ನಂತರ ನನ್ನಲ್ಲಿ ಮಾತಾಡುವಾಗ
" ಕುಡ್ವರೇ , ಅಂದು ನಾನೇನೂ ತಪ್ಪು ಮಾತಾಡಿಲ್ಲ. ನಾನು ಈ ರೀತಿ ಮಾತಾಡಿದ್ದು " ಎಂದು ಅಂದು ಹೇಳಿದ್ದನ್ನು ನನ್ನಲ್ಲಿ ಪುನಃ ಹೇಳಿದರು.ನಾನು ಮನೆಗೆ ಹೋಗಿ ಆ ಕಾರ್ಯಕ್ರಮದ ಸಿ.ಡಿ. ನೋಡಿದಾಗ ಶೆಟ್ಟರು ನನ್ನಲ್ಲಿ ಹೇಳಿದ್ದೇ , ಒಂದಕ್ಷರ ಸಹಾ ಬದಲಾಗದ ರೀತಿಯಲ್ಲೇ , ಸಿ.ಡಿ.ಯಲ್ಲಿತ್ತು . ಅಂಥಹ ಸ್ಮರಣ ಶಕ್ತಿ ಶೆಟ್ಟರದಾಗಿತ್ತು . ಮುಂದೆ ಆ ಹಿರಿಯ ಕಲಾವಿದರೂ, ಅದನ್ನೆಲ್ಲಾ ಮರೆತು ಶೆಟ್ಟರ ಎದುರು ತುಂಬಾ ಸಲ ಅರ್ಥ ಹೇಳಿ ಹೃದಯವೈಶಾಲ್ಯವನ್ನು ತೋರಿದ್ದರು.
ಶೆಟ್ಟರು ಸದಾ ಸ್ಮರಿಸುವ ಕಲಾವಿದರು ಶೇಣಿ , ತೆಕ್ಕಟ್ಟೆ , ಶಂ.ನಾ.ಸಾಮಗ ಹಾಗೂ ರಾ. ಸಾಮಗರು.ನನ್ನಲ್ಲಿ ಮಾತಾಡುವಾಗಲೆಲ್ಲಾ " ಈ ಪ್ರಸಂಗದ ಈ ಪದ್ಯಕ್ಕೆ ಶೇಣಿಯವರು ಹೇಗೆ ಅರ್ಥ ಹೇಳಿದ್ದಾರೆ ? " ಎಂದೆಲ್ಲಾ ಕೇಳುತ್ತಿದ್ದರು. ರಾ.ಸಾಮಗರ ಮಾತಿನ ಶೈಲಿ ಶೆಟ್ಟರಿಗೆ ತುಂಬಾ ಹಿಡಿಸಿತ್ತು. ಕೆಲ ಸಲ ವಿನೋದವಾಗಿ ಸಾಮಗರ ಶೈಲಿಯಲ್ಲೇ ನನ್ನಲ್ಲಿ ಮಾತಾಡುತ್ತಿದ್ದರು.
ದಿ. ಕೊರ್ಗಿ, ಕುತ್ಲೋಡಿ ವಾಸುಶೆಟ್ಟಿ ಹಾಗೂ ಡಾ| ಶಿಮಂತೂರು ನಾರಾಯಣ ಶೆಟ್ಟರಲ್ಲಿ ಅಪಾರ ಗುರು ಭಾವನೆ ಹೊಂದಿದ್ದರು. ಏನಾದರೂ ಕ್ಲಿಷ್ಟ ಪ್ರಶ್ಣೆಗಳಿದ್ದರೆ ಈ ಮೂವರಲ್ಲಿ ಕೇಳಿ ತಿಳಿಯುತ್ತಿದ್ದರು. ಒಮ್ಮೆ ಕೊರ್ಗಿಯವರ ಎದುರು ವಾದ ನಡೆಯುವಾಗ ಶೆಟ್ಟರ ಮಾತಿಗೆ ಪ್ರೇಕ್ಷಕರಿಂದ ಚಪ್ಪಾಳೆ ಬಂತು.ಕೂಡಲೇ ಶೆಟ್ಟರು ಸಭೆಗೆ ಕೈ ಮುಗಿದು ಚಪ್ಪಾಳೆ ತಟ್ಟಬೇಡಿ ಎಂದು ಸನ್ನೆ ಮೂಲಕ ತಿಳಿಸಿದರು. ಎದುರಿರುವವರು ತಮ್ಮ ಗುರುಗಳು ಎಂಬ ನೆಲೆಯಲ್ಲಿ . ಇದನ್ನು ಕೊರ್ಗಿಯವರು ಗಮನಿಸಿದರು . ಗುಣಗ್ರಾಹಿಗಳಾದ ಕೊರ್ಗಿಯವರೂ
" ಏನಿಲ್ಲ , ನಿಮ್ಮ ಕೆಲಸ ನೀವು ಮಾಡಿ " ಎಂದು ಸಭೆಯನ್ನು ಉದ್ದೇಶಿಸಿ ನುಡಿದದ್ದು ಈಗಲೂ ನೆನಪಲ್ಲಿ ಉಳಿಯುವಂಥಹದು. ಎಂಪೆಕಟ್ಟೆ ರಾಮಯ್ಯ ರೈ , ಬೋಳಾರ ನಾರಾಯಣ ಶೆಟ್ಟಿ , ಮಿಜಾರು ಅಣ್ಣಪ್ಪ, ಕುಂಬ್ಳೆ , ಪೆರುವಾಯಿ, ಕೊಳ್ಯೂರು, ಮೂಡಂಬೈಲು, ಡಾ|ಜೋಷಿ , ಗೋವಿಂದ ಭಟ್ ಮುಂತಾದ ಹಿರಿಯ ಕಲಾವಿದರಲ್ಲಿ ಮಾತಾಡುವಾಗ
" ಗುರುಗಳೇ " ಎಂದು ಸಂಬೋಧಿಸುತ್ತಿದ್ದರು. ಮೇಲುಕೋಟೆ , ಸುಣ್ಣಂಬಳ, ವಾ.ಸಾಮಗ , ಜಬ್ಬಾರ್, ಉಜ್ರೆ, ಕಲ್ಚಾರ್, ವರ್ಕಾಡಿ, ಶಂಭುಶರ್ಮ , ಪೆರ್ಮುದೆ, ವಾ.ರಂಗಾ ಭಟ್ , ರಾಮಜೋಯಿಸ್, ಸೀತಾರಾಮ, ವಿಶ್ವನಾಥ ಶೆಟ್ಟಿ , ಪದ್ಯಾಣ, ಹೊಳ್ಳ , ಪಟ್ಲ , ಶಂ.ನಾ.ಭಟ್ ಪದ್ಯಾಣ , ಅರುವ , ಕುಕ್ಕುವಳ್ಳಿ , ನವನೀತ ಶೆಟ್ಟಿ , ಶಶಿಕಾಂತ ಸರಪಾಡಿ, ಸಂಜಯಕುಮಾರ್ ಮುಂತಾದ ಕಲಾವಿದರೊಂದಿಗೆ ಆತ್ಮೀಯರಾಗಿದ್ದರು
೨೦೦೮ರಲ್ಲಿ ಶೆಟ್ಟರೊಂದಿಗೆ ನಾನೂ ದುಬೈಗೆ ಹೋಗಿದ್ದೆ . ಮಿತ್ರರಾದ ಗಿರಿಧರ ನಾಯಕರ ಮನೆಯಲ್ಲೇ ನಮ್ಮ ವಾಸ್ತವ್ಯ .
ಶೆಟ್ಟರ ಅಭಿಮಾನಿಗಳು ಅವರನ್ನುದಿನಾ ಊಟಕ್ಕೆ ಕರೆಯುತ್ತಿದ್ದರು. ಶೆಟ್ಟರು ಪ್ರತೀದಿನ ಸಸ್ಯಾಹಾರ ಊಟವನ್ನೇ ಬಯಸುತ್ತಿದ್ದರು. ಅಭಿಮಾನಿಗಳು ನೀವು ಮಾಂಸಾಹಾರ ತಿನ್ನುವದಿಲ್ಲವೇ ಎಂದು ಕೇಳಿದಾಗ ತಮಾಷೆಯಾಗಿ
" ನಾನು ಶ್ರೀರಾಮ , ಶ್ರೀಕೃಷ್ಣ , ವಿಷ್ಣು ಮುಂತಾದ ಸಾತ್ವಿಕ ಪಾತ್ರ ಮಾಡುವವನಲ್ಲವೇ ? ಅದಕ್ಕಾಗಿ ಸಾತ್ವಿಕ ಆಹಾರ ಭುಜಿಸುವದು " ಎನ್ನುತ್ತಿದ್ದರು.
ಕನ್ನಡ, ತುಳು, ತೆಂಕು, ಬಡಗುಗಳಲ್ಲಿ ಅರ್ಥಧಾರಿ ಹಾಗೂ ವೇಷಧಾರಿಯಾಗಿರುವ ಬೆರಳೆಣಿಕೆಯ ಕಲಾವಿದರಲ್ಲಿ ಚೆನ್ನಪ್ಪ ಶೆಟ್ಟರ ಹೆಸರು ಚಿರಸ್ತಾಯಿಯಾಗಿ ಉಳಿದಿದೆ. ನಾನು ಏನಾದರೂ ಪೌರಾಣಿಕ ಕಥೆಗಳ ಬಗ್ಗೆ ತಿಳಿಯಬೇಕೆಂದಿದ್ದರೆ ಮೊದಲು ಫೋನ್ ಮಾಡುವದು ಶೆಟ್ಟರಿಗೆ . ಅವರಿಗೆ ತಿಳಿದಿಲ್ಲವಾದಲ್ಲಿ ಮೂಡಂಬೈಲು ಶಾಸ್ತ್ರಿಗಳಲ್ಲಿ ಕೇಳುವದು. ಶೆಟ್ಟರುಸರಿಯಾದ ಉತ್ತರ ಕೊಟ್ಟರೂ ,
" ಕುಡ್ವರೇ, ಅದು ನೂರಕ್ಕೆ ನೂರು ಸರಿಯಾ ಎಂದು ಪುಸ್ತಕ ನೋಡಿ ಹೇಳುತ್ತೇನೆ " ಎಂದು ಹೇಳಿ ಪುನಃ ಫೋನ್ ಮಾಡುತ್ತಿದ್ದರು. ತಾನು ಹೇಳಿದ್ದು ಸರಿಯೋ ಎಂದು ಅವರನ್ನೇ ಅವರು ಪರೀಕ್ಷೆಗೊಳಪಡಿಸುತ್ತಿದ್ದರು. ಚೆನ್ನಪ್ಪ ಶೆಟ್ಟರ ಮರಣದ ನಾಲ್ಕು ದಿನ ಮೊದಲು ನನ್ನ ಮಿತ್ರರೊಬ್ಬರು
" ಕುಬೇರನ ವಾಹನ ಯಾವದು ? " ಎಂದು ಪ್ರಶ್ಷಿಸಿದರು. ಟಿ.ವಿ.ಒಂದರಲ್ಲಿ ಸ್ಪರ್ಧೆಗಾಗಿ ಆ ಪ್ರಶ್ಣೆ ಬಂದಿತ್ತಂತೆ .ನನಗೆ
ತಿಳಿದಿರದ ಕಾರಣ, ನಾನು ಶೆಟ್ಟರಿಗೆ ಕರೆ ಮಾಡಿ ಕೇಳಿದೆ. ಕೂಡಲೇ ಶೆಟ್ಟರು , ಎಲ್ಲಾ ಅಷ್ಟದಿಕ್ಪಾಲಕರ ವಾಹನ ಅವರ ಹೆಂಡಂದಿರ ಹೆಸರನ್ನೂ ತಿಳಿಸಿದರು .
ತಾರನಾಥ ವರ್ಕಾಡಿಯವರ
" ಬಲ್ಲಿರೇನಯ್ಯಾ " ಯಕ್ಷಗಾನ ಪತ್ರಿಕೆಯಲ್ಲಿ ನನ್ನ ಆತ್ಮೀಯರಾದ ವಿದ್ವಾನ್ ಗಾಳಿಮನೆ ವಿನಾಯಕ ಭಟ್ ರವರು ಪ್ರತೀ ಸಂಚಿಕೆಯಲ್ಲಿ
" ಪೌರಾಣಿಕ ಪದಬಂಧ " ರಚಿಸುತ್ತಿದ್ದರು. ಇದೊಂದು ಸ್ಪರ್ಧೆಯಾಗಲಿ ಎಂಬ ನೆಲೆಯಲ್ಲಿ ನಾನು ಪ್ರತೀ ತಿಂಗಳ ಇಬ್ಬರು ವಿಜೇತರಿಗೆ ಬಹುಮಾನದ ಪ್ರಾಯೋಜಕತ್ವ ನೀಡುತ್ತಿದ್ದೆ . ಅದರಲ್ಲಿ ಬಂದ ಪ್ರಶ್ಣೆಯೊಂದರ ಬಗ್ಗೆ , ಅವರು ಆಸ್ಪತ್ರೆಗೆ ಸೇರುವ ಮುನ್ನಾ ದಿನ ನನ್ನಲ್ಲಿ ಅರ್ಧ ಘಂಟೆ ಮಾತಾಡಿ, ಪದಬಂಧ ಮೆಚ್ಚಿ ಗಾಳಿಮನೆಯವರ ನಂಬ್ರ ಕೇಳಿದ್ದರು. ಅದೇ ಕೊನೆ , ಶೆಟ್ಟರು ಮಾತಾಡದ ಲೋಕಕ್ಕೇ ತೆರಳಿದ್ದರು .
ಮಣಿಪಾಲದ ಕೆ.ಎಂ.ಸಿ .ಆಸ್ಪತ್ರೆಗೆ ಹೋದರೂ , ಅವರು I.C.U. ನಲ್ಲಿದ್ದ ಕಾರಣ ನೋಡಲಾಗಲಿಲ್ಲ . ಅವರ ಅಂತಿಮ ಯಾತ್ರೆಗೆ ಸಾಕ್ಷಿಯಾಗಬೇಕಾಯಿತು.
ಎಂ.ಶಾಂತರಾಮ ಕುಡ್ವ
ಮೂಡಬಿದಿರೆ

ಮಿಜಾರು ಅಣ್ಣಪ್ಪರು ವಿಧಿವಶ

ಮಿಜಾರು ಅಣ್ಣಪ್ಪರು ವಿಧಿವಶ
೬೮ ವರ್ಷಗಳ ತಿರುಗಾಟ ನಡೆಸಿ ನಿವೃತ್ತರಾದ ಯಕ್ಷರಂಗದ ಸುಪ್ರಸಿಧ್ಧ ಹಾಸ್ಯ ಕಲಾವಿದ " ಹಾಸ್ಯ ಚಕ್ರವರ್ತಿ" ಬಿರುದಾಂಕಿತ ಮಿಜಾರು ಅಣ್ಣಪ್ಪರು ನಿನ್ನೆ ರಾತ್ರಿ ೮.೧೫ ಕ್ಕೆ ( ೦೩.೦೪.೨೦೧೬ ನೇ ಭಾನುವಾರ ) ನಿಧನ ಹೊಂದಿದರು. ಸುಮಾರು ೯೨ ವರ್ಷ ಪ್ರಾಯದ ಅಣ್ಣಪ್ಪರು ಕೊನೆಗಾಲದ ವರೆಗೂ ಆರೋಗ್ಯವಂತರಾಗಿದ್ದರು .
ನಿನ್ನೆ ಬೆಳಿಗ್ಗೆ ಹಾಗೂ ಮಧ್ಯಾಹ್ನ ಆಹಾರವನ್ನು ಸೇವಿಸಿದ್ದ ಅಣ್ಣಪ್ಪರು ರಾತ್ರಿ ೮.೦೦ ಘಂಟೆಗೆ ಊಟಕ್ಕೆ ಕುಳಿತ್ತಿದ್ದರು . ಎರಡು ತುತ್ತು ಅನ್ನ ಸೇವಿಸಿ , ಕೂಡಲೇ ನಿಧನರಾದರು. ಬಹುಷಃ ಹೃದಯಾಘಾತ ಉಂಟಾಗಿರುವ ಸಂಭವವಿರಬಹುದೇನೋ ? ಅಂತೂ ೮.೧೫ ಕ್ಕೆ ಅಣ್ಣಪ್ಪರ ಜೀವನಯಾತ್ರೆ ಅಂತ್ಯಗೊಂಡಿತು .
ಅಣ್ಣಪ್ಪರ ಪಾರ್ಥಿವ ಶರೀರದ ಅಂತಿಮ ದರ್ಶನ ಮಾಡಿ ಬಂದಾಗ, ಅಣ್ಣಪ್ಪರೊಂದಿಗಿನ ನನ್ನ ಆತ್ಮೀಯತೆ ಕಣ್ಣ ಎದುರೇ ಚಿತ್ರ ಕಟ್ಟಿದ್ದು ಸುಳ್ಳಲ್ಲ .
ಮಳೆಗಾಲದಲ್ಲಿ ಯಾವಾಗಲೂ ನನ್ನ ಅಂಗಡಿಗೆ ಬಂದು ನಾಲ್ಕೈದು ಘಂಟೆಗಳ ಕಾಲ ನನ್ನಲ್ಲಿ ಸರಸಮಯವಾಗಿ ಕಾಲ ಕಳೆಯುತ್ತಿದ್ದರು . ಹಾಸ್ಯಮಯವಾಗಿ ರಂಜಿಸುತ್ತಿದ್ದುದು ಈ ಎಲ್ಲಾ ನೆನಪುಗಳು ಮರುಕಳಿಸಿತು .
ನಾಲ್ಕು ತಿಂಗಳ ಹಿಂದೆ " ಕಣಿಪುರ ಪತ್ರಿಕೆ " ಯ ಸಂದರ್ಶನಕ್ಕಾಗಿ, ಸಂಪಾದಕರಾದ ನಾರಾಯಣ ಚಂಬಲ್ತಿಮಾರರೊಂದಿಗೆ , ಸಂದರ್ಶನ ನಡೆಸಿದ ಕೋಣೆಯಲ್ಲೇ , ಇಂದು ಅಣ್ಣಪ್ಪರ ಪಾರ್ಥಿವ ಶರೀರ ಕಂಡಾಗ
" ಮಾನವ ಜನ್ಮ ಎಂಬುದು ನೀರ ಮೇಲಿನ ಗುಳ್ಳೆ " ಎಂಬ ಗಾದೆ ಸ್ಪಷ್ಟವಾಗಿ ಮನದಟ್ಟಾಯಿತು .
" ನಿನ್ನೆ ಜನನ , ಇಂದು ಜೀವನ. ಆದರೂ ನಾಳೆ ಮರಣ " ಎಂಬ ದಾಸವಾಣಿ ಕಿವಿಯಲ್ಲಿ ರಿಂಗಣಿಸಿತು.
ಆದರೂ " ಇಂದು ಜೀವನ " ಎಂಬುದನ್ನು ಸಾರ್ಥಕಗೊಳಿಸಬೇಕಾದುದು ಮಾನವನ ಕರ್ತವ್ಯ . ಅಣ್ಣಪ್ಪರು ಇದನ್ನು ನಿಜವಾಗಿಯೂ ಮಾಡಿ ತೋರಿಸಿದವರು . ಯಕ್ಷರಂಗದಲ್ಲಿ ಹಾಸ್ಯಕ್ಕೆ " ತಾರಾಮೌಲ್ಯ " ತಂದವರು , ತುಳುಜಾನಪದ ಪ್ರಸಂಗಗಳ ಹಾಸ್ಯ ಪಾತ್ರಗಳಿಗೆ ಜೀವಂತ ಚಿತ್ರಣ ಕೊಟ್ಟು ಅಜರಾಮರವಾದವರು. ಸಾವಿರಾರು ಸಂಮಾನ ಪಡೆದು, ಲಕ್ಷಾಂತರ ಅಭಿಮಾನಿಗಳ ಮನ ಗೆದ್ದವರು ಅಣ್ಣಪ್ಪರು . ತಮ್ಮ ಕಲಾಚೈತ್ರ ಯಾತ್ರೆಯಲ್ಲಿ ಒಂದೇ ಕುಟುಂಬದ ಮೂರು ತಲೆಮಾರಿನ ಯಾಜಮಾನ್ಯತೆಯಲ್ಲಿ ತಿರುಗಾಟ ನಡೆಸಿದ ಏಕೈಕ ಯಕ್ಷಗಾನ ಕಲಾವಿದರು ಅಣ್ಣಪ್ಪರು ಮಾತ್ರ ಎಂಬುದು ಬಹುಷಃ ಯಕ್ಷಪ್ರಪಂಚದ ಮಟ್ಟಿಗೆ ದಾಖಲೆಯೇ ಹೌದು .
ನಿನ್ನೆ ತಾನೇ ಯಕ್ಷರಂಗದ ಸವ್ಯಸಾಚಿ , ಯಕ್ಷಗುರುಗಳಾದ ಶ್ರೀ ಗೋವಿಂದ ಭಟ್ಟರು ನನ್ನಲ್ಲಿ ,
" ಕುಡ್ವರೇ , ನಿರಂತರ ೫೦ ವರ್ಷಗಳ ಕಾಲ ಒಬ್ಬರೇ ಯಾಜಮಾನ್ಯತ್ವದಲ್ಲಿ ದುಡಿದ ಕಲಾವಿದರು ಯಾರಾದರೂ ಇದ್ದಾರಾ ? ಅಂಥಹ ಕಲಾವಿದರಾರಾದರೂ ಇದ್ದಲ್ಲಿ ಅವರನ್ನು ಸಂಮಾನಿಸಬೇಕೆಂಬ ಯೋಜನೆ ಇದೆ "
ಎಂದು ನನ್ನಲ್ಲಿ ಪ್ರಶ್ಣಿಸಿದ್ದರು .ಆಗ ನಾನು
" ಒಬ್ಬರೇ ಯಜಮಾನರಲ್ಲಿ ನಿರಂತರ ೫೦ ವರ್ಷಗಳ ಕಾಲ ದುಡಿದವರು ಯಾರೂ ಇಲ್ಲ .ಆದರೂ ಒಂದೇ ಕುಟುಂಬದ ಯಾಜಮಾನ್ಯದಲ್ಲಿ ನಿರಂತರ ೬೮ ವರ್ಷಗಳ ಕಾಲ ದುಡಿದ ಅಣ್ಣಪ್ಪರು ಇಂದಿಗೂ ನಮ್ಮೊಂದಿಗಿದ್ದಾರೆ "
ಎಂದು ನುಡಿದಿದ್ದೆ . ಈ ಮಾತು ಕೇವಲ ೨೪ ಘಂಟೆಗಳಲ್ಲೇ ಮುರಿದು ಹೋಯಿತಲ್ಲಾ " ಎಂದು ನೆನೆದಾಗ ಬೇಸರವಾಗುತ್ತಿದೆ .

ಅಣ್ಣಪ್ಪರ ಅಂತಿಮ ಸಂಸ್ಕಾರ ಇಂದು ಮಧ್ಯಾಹ್ನ ೧೨.೦೦ ಘಂಟೆಗೆ ಜರಗಲಿದೆ ಎಂದು ಅವರ ಸುಪುತ್ರರಾದ ಶ್ರೀ ಸದಾಶಿವರು ತಿಳಿಸಿದ್ದಾರೆ .
ತಾನೂ ನಕ್ಕು , ಪ್ರೇಕ್ಷಕರನ್ನೂ ನಗಿಸಿದ ಅಣ್ಣಪ್ಪರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಆ ಯಕ್ಷ ಕಲಾಮಾತೆಯಲ್ಲಿ , ವೇದಿಕೆಯ ಸರ್ವ ಸದಸ್ಯರ ಪರವಾಗಿ ಪ್ರಾರ್ಥಿಸುತ್ತೇನೆ.
ಎಂ. ಶಾಂತರಾಮ ಕುಡ್ವ
ಮೂಡಬಿದಿರೆ

ಮಿಜಾರು ಅಣ್ಣಪ್ಪರು

ಮಿಜಾರು ಅಣ್ಣಪ್ಪರು
ಮಂಗಳೂರು ತಾಲೂಕಿನ ಮೂಡಬಿದಿರೆ ಸಮೀಪದ ಊರಾದ
" ಮಿಜಾರು " ಮೂರು ವಿಷಯಗಳಿಂದ ಪ್ರಸಿಧ್ಧಿ ಹೊಂದಿದೆ .
೧ .ಕೈ ಮಗ್ಗದ ಸೀರೆಗಳಿಗಾಗಿ .
೨ . " ಕಾಡು ಹೀರೆ " ( ಪಾಗೀಳ್) ಎಂಬ ಔಷಧಿಯುಕ್ತ ತರಕಾರಿ ಬೆಳೆಗಾಗಿ.
೩ . ಯಕ್ಷರಂಗದ ಸುಪ್ರಸಿಧ್ಧ ಹಾಸ್ಯ ಕಲಾವಿದ ಶ್ರೀ ಮಿಜಾರು ಅಣ್ಣಪ್ಪರಿಂದಾಗಿ .
ತನ್ನ ವ್ಯಕ್ತಿತ್ವದಿಂದಾಗಿ ತಾನು ಹುಟ್ಟಿದ ಊರಿನ ಹೆಸರನ್ನೇ ಎಲ್ಲೆಡೆ ಪಸರಿಸಿದ ೯೨ ವರ್ಷ ವಯಸ್ಸಿನ ಮಿಜಾರು ಅಣ್ಣಪ್ಪರು , ಈಗ ಯಕ್ಷಗಾನದಿಂದ ನಿವ್ರತ್ತರಾದರೂ, ಅವರು ಯಕ್ಷಗಾನಕ್ಕೆ ಕೊಟ್ಟ ಅಮೂಲ್ಯ ಕೊಡುಗೆ ಮರೆಯುವಂತಿಲ್ಲ .ಅಪಾರ ಪೌರಾಣಿಕ ಜ್ಞಾನ, ಸಂದರ್ಭೋಚಿತವಾದ ಹಾಸ್ಯ, ಸಹಕಲಾವಿದರೊಂದಿಗೆ ಹೊಂದಿಕೊಂಡು ಹೋಗುವ ಚಾತುರ್ಯಗಳೊಂದಿಗೆ ಲಕ್ಷಾಂತರ ಪ್ರೇಕ್ಷಕರ ಹೃದಯದಲ್ಲಿ ಸ್ತಾನ ಗಳಿಸಿದವರು ಅಣ್ಣಪ್ಪರು . ಅದರಲ್ಲೂ ತುಳು ಪ್ರಸಂಗಗಳಲ್ಲಿ ಅಣ್ಣಪ್ಪರಷ್ಟು ವಿಜ್ರಂಭಿಸಿದವರು ಯಾರೂ ಇರಲಿಕ್ಕಿಲ್ಲ. ಕೋಟಿಚೆನ್ನಯದ ಪಯ್ಯಬೈದ್ಯ , ಜ್ಯೋತಿಷಿ , ದೇವುಪೂಂಜದ ಲಿಂಗಪ್ಪ ಆಚಾರಿ , ಕೋರ್ದಬ್ಬು ಬಾರಗದ ಕೋರ್ದಬ್ಬುವಿನ ಸಖನ ಪಾತ್ರ ಮುಂತಾದವೆಲ್ಲಾ ಅಣ್ಣಪ್ಪರಿಂದಲೇ ಸ್ರಷ್ಟಿಸಲ್ಪಟ್ಟ ಪಾತ್ರಗಳು. " ಹಾಸ್ಯಚಕ್ರವರ್ತಿ " ,
" ಅಭಿನವ ತೆನಾಲಿ " ಎಂದೆಲ್ಲಾ ರಸಿಕರಿಂದ ನೆಗಳ್ತೆಗೆ ಪಾತ್ರರಾದ ಅಣ್ಣಪ್ಪರು , ಯಕ್ಷಗಾನದ ಹಿನ್ನೆಲೆ ಇಲ್ಲದ ಕುಟುಂಬದಲ್ಲಿ ಜನಿಸಿಯೂ ಆಗಸದೆತ್ತರಕ್ಕೆ ಕೀರ್ತಿಪತಾಕೆ ಹಾರಿಸಿದ ಅಪ್ರತಿಮ ಯಕ್ಷ ಕಲಾವಿದರು .೬೮ ವರ್ಷಗಳ ಕಾಲ ಯಕ್ಷರಂಗವನ್ನು ಹಾಸ್ಯದ ಮೂಲಕ " ಆಳಿದ " ಈ ಶತಮಾನದ ಅಪೂರ್ವ ಕಲಾವಿದರು.
ನಾನು ಚಿಕ್ಕಂದಿನಲ್ಲಿ ತುಳು ಪ್ರಸಂಗ ನೋಡಲು ಮನೆಯಲ್ಲಿ ನನಗೆ ತಂದೆಯವರ ನಿರ್ಭಂಧವಿತ್ತು .ಆದರೂ ನಾನೊಮ್ಮೆ ತಂದೆಯವರ ಕಣ್ಣು ತಪ್ಪಿಸಿ ಕರ್ಣಾಟಕ ಮೇಳದವರ ಆಟಕ್ಕೆ ಹೋದೆ . ಮಧ್ಯರಾತ್ರಿ ಸಮಯ ಒಬ್ಬರ ಹಾಸ್ಯದ ಪ್ರವೇಶ. ಪರದೆ ಎತ್ತಿದ ಕೂಡಲೇ ಆ ಹಾಸ್ಯಗಾರರು
" ವಾ ಒಂಜಿ ಚಳಿ ಮಾರಾಯ್ರೇ "
( ಎಂಥಹ ಚಳಿ ಮಾರಾಯ್ರೇ )
ಎಂದದ್ದೇ ತಡ ಇಡೀ ಸಭೆಯೇ ನಕ್ಕು ಚಪ್ಪಾಳೆ ತಟ್ಟಲಾರಂಭಿಸಿತು . ನಿಜವಾಗಿಯೂ ನನಗೆ ಇದರಲ್ಲೇನೂ ಹಾಸ್ಯ ಕಾಣಲಿಲ್ಲ . ಆದರೂ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಯಾಕೆ ನಕ್ಕಿದ್ದೆಂದು ನನಗೆ ತುಂಬಾ ಆಶ್ಚರ್ಯವಾಯಿತು. ನನ್ನ ಪಕ್ಕದಲ್ಲಿ ಕುಳಿತವರಲ್ಲಿ ಈ ಬಗ್ಗೆ ವಿಚಾರಿಸಿದಾಗ ಅವರು ಹೇಳಿದ್ದು .
" ಅವರು ಸುಪ್ರಸಿಧ್ಧ ಹಾಸ್ಯಗಾರರಾದ ಮಿಜಾರು ಅಣ್ಣಪ್ಪರು. ಅವರು ಈಗ ಹೇಳಿದ್ದು ಹಾಸ್ಯವಲ್ಲದಿರಬಹುದು. ಆದರೆ , ಮುಂದೆ ಅವರಿಂದ ಬರುವ ಹಾಸ್ಯಗಳಿಗೆ ಜನರ ಮೆಚ್ಚುಗೆ ಇದು "
ಎಂದರು .ಅಣ್ಣಪ್ಪರ ಪ್ರವೇಶಕ್ಕೇ ಪ್ರೇಕ್ಷಕರ ಸ್ಪಂದನೆಯಿದು .
ನಾನು ಅಣ್ಣಪ್ಪರ ಹೆಸರು ಕೇಳಿದ್ದರೂ ಅವರ ಪಾತ್ರ ಅಂದೇ ಪ್ರಥಮವಾಗಿ ನೋಡಿದ್ದು . ನಂತರ ಅಣ್ಣಪ್ಪರಿಂದ ಹಾಸ್ಯದ ಹೊನಲೇ ಹರಿಯಿತು. ನಾನೂ ಅವರ ಅಭಿಮಾನಿಯಾದೆ. ಕರ್ಣಾಟಕ ಮೇಳದ ಆಟಗಳ ಖಾಯಾಂ ಪ್ರೇಕ್ಷಕನಾದೆ . ಮೆಲ್ಲಗೇ ಚೌಕಿಗೆ ಹೋಗಿ ಅಣ್ಣಪ್ಪರ ಪರಿಚಯ ಮಾಡಿಕೊಂಡೆ . ಕಾಲಕ್ರಮೇಣ ಅಣ್ಣಪ್ಪರೂ ನಾನೂ ತುಂಬಾ " ಆಪ್ತ " ರಾದೆವು.
ಅಣ್ಣಪ್ಪರಿಗೆ ವಿಜಯ , ಮಕರಂದ , ದಾರುಕ , ಬಾಹುಕ , ಮುಂತಾದ ಪೌರಾಣಿಕ ಪಾತ್ರಗಳು ಅಪಾರ ಜನಪ್ರಿಯತೆಯನ್ನು ತಂದು ಕೊಟ್ಟರೂ , ಅಣ್ಣಪ್ಪರಿಗೆ ಪ್ರಸಿಧ್ಧಿಯನ್ನು ತಂದದ್ದು ತುಳು ಪ್ರಸಂಗಗಳ ವಿಭಿನ್ನ ಪಾತ್ರಗಳು.ಕೋಟಿಚೆನ್ನಯ , ದೇವುಪೂಂಜ ಪ್ರತಾಪ , ಕಾಂತಾಬಾರೆ ಬುದಬಾರೆ , ಕೋರ್ದಬ್ಬುಬಾರಗ, ಜಾಲಕೊರತಿ ಮುಂತಾದ ತುಳುನಾಡಿನ ಜಾನಪದ ಆಧಾರಿತ ಪ್ರಸಂಗಗಳ ಎಲ್ಲಾ ಹಾಸ್ಯ ಪಾತ್ರಗಳಿಗೆ ಮೂಲಚಿತ್ರಣ ಕೊಟ್ಟವರೇ ಅಣ್ಣಪ್ಪರು . ಉಳಿದ ಮೇಳಗಳ ಹಾಸ್ಯಗಾರರೆಲ್ಲಾ ಅಣ್ಣಪ್ಪರ ಚಿತ್ರಣವನ್ನೇ ಅನುಕರಿಸಿಕೊಂಡು ಹೋದದ್ದೆಂಬುದು ಸತ್ಯ . ಕಾಲ್ಪನಿಕ ತುಳು ಪ್ರಸಂಗಗಳಾದ ಕಾಡಮಲ್ಲಿಗೆಯ ಚೋಂಕ್ರ , ದಳವಾಯಿ ದುಗ್ಗಣ್ಣದ ಕಂಪಣಮೂಲ್ಯ , ಕೌಡೂರ ಬೊಮ್ಮೆಯ ಬೊಮ್ಮ , ಬೊಳ್ಳಿಗಿಂಡೆಯ ಹೆಡ್ಡ ಕೇಚುಬಲ್ಲಾಳ ಮುಂತಾದ ಪಾತ್ರಗಳು ಅಣ್ಣಪ್ಪರನ್ನು ಉತ್ತುಂಗಶಿಖರಕ್ಕೇರಿಸಿದ ಪಾತ್ರಗಳು .
ಶುಧ್ಧ ತುಳು ಭಾಷೆಯನ್ನೇ ಆಡುವ
" ಕೆಲವೇ " ಬೆರಳೆಣಿಕೆಯ ಕಲಾವಿದರಲ್ಲಿ ಅಣ್ಣಪ್ಪರೂ ಓರ್ವರೆಂಬುದು ಉಲ್ಲೇಖನೀಯ." ಸಾಮಗ, ಕೊಳ್ಯೂರು ಹಾಗೂ ಅಣ್ಣಪ್ಪರ " ಜೋಡಿ ಅತ್ಯಂತ ಪ್ರಸಿಧ್ಧ . ಕರ್ಣಾಟಕ ಮೇಳ ಪ್ರಸಿಧ್ಧಿ ಪಡೆಯಲು ಮಿಜಾರು ಅಣ್ಣಪ್ಪರ ಕೊಡುಗೆಯೂ ಅಪಾರ. ತಮ್ಮ ೬೮ ವರ್ಷಗಳ ಸುದೀರ್ಘ ತಿರುಗಾಟದಲ್ಲಿ ೬೦ ವರ್ಷಗಳನ್ನು ಒಂದೇ ಮನೆತನದ , ಮೂರು ತಲೆಮಾರಿನ ಯಜಮಾನರಲ್ಲೇ ಕಳೆದಿರುವದು , ಇವರ ಸ್ವಾಮಿನಿಷ್ಟೆಗೆ ಉತ್ತಮ ಉದಾಹರಣೆ . ( ದಿ. ಕೊರಗ ಶೆಟ್ಟಿ , ದಿ. ವಿಟ್ಟಲ ಶೆಟ್ಟಿ ಹಾಗು ದೇವಿಪ್ರಸಾದ್ ಶೆಟ್ಟಿ . )
ಅತ್ಯಂತ ಬಡತನದಲ್ಲಿ ಕುಡುಬಿ ಜನಾಂಗದಲ್ಲಿ ಹುಟ್ಟಿ ಜೀವನೋಪಾಯಕ್ಕಾಗಿ ಯಕ್ಷಗಾನವನ್ನೇ ಅವಲಂಬಿಸಿದವರು ಅಣ್ಣಪ್ಪರು . ಕರ್ಣಾಟಕ ಮೇಳ ಸೇರಿದ ಪ್ರಾರಂಭದಲ್ಲಿ ರಾಕ್ಷಸ ಪಾತ್ರ ಮಾಡುತ್ತಿದ್ದ ಅಣ್ಣಪ್ಪರು , ದಿ. ಕೊರಗಶೆಟ್ಟರ ಒತ್ತಾಯದ ಮೇರೆಗೆ ಹಾಸ್ಯಪಾತ್ರ ಮಾಡಲು ತಯಾರಾದರು .ಅದರಲ್ಲಿ ಯಶಸ್ವಿಯೂ ಆದರು . ಹೀಗೆ ದಿ. ಕೊರಗ ಶೆಟ್ಟರ ದೂರದರ್ಶಿತ್ವದಿಂದಾಗಿ ಯಕ್ಷರಂಗಕ್ಕೆ ಅನರ್ಘ್ಯ ಹಾಸ್ಯಗಾರರೊಬ್ಬರ ಸೃಷ್ಟಿಯಾಯಿತು .ಅಣ್ಣಪ್ಪರು ಯಾವದೇ ದುಶ್ಚಟಗಳನ್ನು ಹೊಂದದ ಕಾರಣ ದುಡಿಮೆಯಿಂದಲೇ ಆಸ್ತಿ ಗಳಿಸಿ ಉತ್ತಮ ಕೃಷಿಕರೆಂಬ ಪ್ರಸಿಧ್ಧಿಯನ್ನೂಹೊಂದಿದವರು . ಲಕ್ಷಾಂತರ ಅಭಿಮಾನಿಗಳ ಕಣ್ಮಣಿಯಾದ ಅಣ್ಣಪ್ಪರು ಸಾವಿರಾರು ಸಂಮಾನ ಪಡೆದವರು .೧೫ ವರ್ಷಗಳ ಹಿಂದೆ ಬೆಂಗಳೂರಿನ ಜಡ್ಜ್ ಓರ್ವರು , ಮಂಗಳೂರಿನಿಂದ ಮೂಡಬಿದಿರೆಯ ತಮ್ಮ ಸಂಬಂಧಿಕರ ಮನೆಗೆ ಬರುತ್ತಿದ್ದರು . ದಾರಿಯಲ್ಲಿ ಮಿಜಾರು ತಲುಪಿದಾಗ ಪ್ರತಿಷ್ಟಿತ ಬಂಟ ಸಮಾಜದ ಆ ಜಡ್ಜ್ ರವರು ,
" ಸುಪ್ರಸಿಧ್ಧ ಹಾಸ್ಯಗಾರ ಅಣ್ಣಪ್ಪರ ಊರಲ್ಲವೇ ಇದು ? "
ಎಂದು ತಮ್ಮ ಕಾರಿನ ಚಾಲಕರಲ್ಲಿ ವಿಚಾರಿಸಿ ಹೌದೆಂದು ಗೊತ್ತಾದ ಕೂಡಲೇ ನೇರವಾಗಿ ಅಣ್ಣಪ್ಪರ ಮನೆಗೇ ತೆರಳಿ ಅಣ್ಣಪ್ಪರ ಯೋಗಕ್ಷೇಮ ವಿಚಾರಿಸಿ ,
ಮುಂದಿನ ತಿಂಗಳಲ್ಲಿ ತಮ್ಮ ಮನೆಯಲ್ಲಿ ಜರಗಲಿರುವ ಖಾಸಗೀ ಸಮಾರಂಭಕ್ಕೆ ಬರಲೇಬೇಕೆಂದು ಆಹ್ವಾನಿಸಿದರು . ಮೂಡಬಿದಿರೆಯ ತಮ್ಮ ಸಂಬಂದಿಕರಲ್ಲೂ ಈ ವಿಷಯ ತಿಳಿಸಿ , ಅಣ್ಣಪ್ಪರನ್ನು ಬೆಂಗಳೂರಿಗೆ ಕರೆತರುವ ವ್ಯವಸ್ತೆಯನ್ನೂ ಮಾಡಿದರು. ಬೆಂಗಳೂರಿನಲ್ಲಿ ಅಣ್ಣಪ್ಪರಿಗೆ ಪಂಚತಾರಾ ಹೊಟೇಲಲ್ಲಿ ಉಳಕೊಳ್ಳುವ ವ್ಯವಸ್ತೆ ಮಾಡಿ , ಸಾಯಂಕಾಲದ ಸಮಾರಂಭದಂದು ಅಣ್ಣಪ್ಪರನ್ನು ವೇದಿಕೆಯಲ್ಲೇ ಕುಳ್ಳಿರಿಸಿ ಅದ್ದೂರಿ ಸಂಮಾನದೊಂದಿಗೆ ಅಲ್ಲಿ ನೆರೆದ ಅತಿಥಿಗಳಿಗೆ ಪರಿಚಯಿಸಿ ₹ ೧೦,೦೦೦/ ನಗದು ನೀಡಿದರು . ಆ ಕಾಲದಲ್ಲಿ ಇದು ದೊಡ್ಡ ಮೊತ್ತ ಎಂಬುದು ಗಮನಾರ್ಹ . ಇದಾಗಿ ಪ್ರತೀವರ್ಷ ಅಣ್ಣಪ್ಪರನ್ನು ಬೆಂಗಳೂರಿಗೆ ಕರೆಸಿ ಸಂಮಾನಿಸುತ್ತಿದ್ದರು . ( ಈ ವಿಷಯವನ್ನು ಅಣ್ಣಪ್ಪರೇ ನನಗೆ ತಿಳಿಸಿದ್ದರು )
ಅಣ್ಣಪ್ಪರೊಂದಿಗೆ ನನಗೆ ಸುಮಾರು ೩೦ ವರ್ಷಗಳ ಒಡನಾಟ . ಸುಪ್ರಸಿಧ್ದ ಕಲಾವಿದರಾದರೂ ನಿಗರ್ವಿ , ಸರಳಬದುಕಿನ ಹಸನ್ಮುಖದ ವ್ಯಕ್ತಿ . ಸದಾ ಬಿಳಿಪಂಚೆ ಹಾಗೂ ಶರ್ಟ್ ಧರಿಸುವ ಜೀವನಶೈಲಿ. ನಿಜ ಜೀವನದಲ್ಲೂ ಹಾಸ್ಯಪ್ರವೃತ್ತಿ ಉಳ್ಳವರು . ನನ್ನನ್ನು
" ಧನಿಗಳೇ " ಎಂದು ಸಂಬೋಧಿಸುವಾಗ ನಾನು ಎಷ್ಟೋ ಸಲ ಆಕ್ಷೇಪಿಸಿ ನಿಮ್ಮಂಥಹ ಶ್ರೇಷ್ಟ ಕಲಾವಿದರು ಆ ರೀತಿ ಕರೆಯುವದು ನನಗೆ ಮುಜುಗರಕ್ಕೆ ಕಾರಣವಾಗುತ್ತದೆ ಎಂದರೂ , ಆ " ಚಾಳಿ " ಬಿಟ್ಟವರೇ ಅಲ್ಲ . ಉತ್ತಮ ಕೃಷಿಕರಾದ ಅಣ್ಣಪ್ಪರು , ತಮ್ಮ ಮನೆಯಲ್ಲಿ ಬೆಳೆಸುತ್ತಿದ್ದ
" ಕಾಡುಹೀರೆ " ಯನ್ನು ವರ್ಷಕ್ಕೆರಡು ಭಾರಿ , ನನ್ನ ಅಂಗಡಿಗೆ ತಂದು
" ಧನಿಗಳಿಗೆ ಬುಲೆ ಕಾಣಿಕೆ " ಎಂದು ತಂದು ಕೊಡುತ್ತಿದ್ದರು . ( ತಮ್ಮ ಯಜಮಾನರಾದ ವಿಟ್ಟಲ ಶೆಟ್ಟಿ , ನಿಟ್ಟೆ ಭಾಸ್ಕರ ಶೆಟ್ಟಿ ಹಾಗು ನನಗೆ ಮಾತ್ರ ಇದನ್ನು ನೀಡುತ್ತಿರುವದು ಎಂದು ನನ್ನಲ್ಲಿ ತಿಳಿಸಿದ್ದರು )
ನಾನು ಹಿಂದೊಮ್ಮೆ " ಹೊಸದಿಗಂತ " ಪತ್ರಿಕೆಯಲ್ಲಿ ಅವರ ಸಂಪೂರ್ಣ ವ್ಯಕ್ತಿ ಪರಿಚಯದ ಲೇಖನ ಬರೆದಿದ್ದೆ . ಅಣ್ಣಪ್ಪರ ಸಮಗ್ರ ಪರಿಚಯವನ್ನು ಬರೆದಿದ್ದೆ .ಅಣ್ಣಪ್ಪರು ಆ ಪತ್ರಿಕೆಯನ್ನು ಜತನದಿಂದ ತೆಗೆದಿಟ್ಟು ಎಲ್ಲರಿಗೂ ಓದಲು ಕೊಟ್ಟು
" ಇದನ್ನು ಬರೆದದ್ದು , ನಮ್ಮ ಕುಡ್ವರು "
ಎಂದು ಸಂಭೃಮಿಸಿದ್ದದ್ದು ನನಗೆ ಈಗಲೂ ನೆನಪಿದೆ . ಮಳೆಗಾಲದಲ್ಲಿ ಯಾವಾಗಲೂ ನನ್ನ ಅಂಗಡಿಯಲ್ಲಿ ನಾಲ್ಕೈದು ಘಂಟೆಗಳ ಕಾಲ ನನ್ನೊಂದಿಗೆ ಮಾತಾಡುವ ಪರಿಪಾಠ ಹೊಂದಿದ್ದರು . " ಗುರುಗಳೇ ,ನಿಮಗೇನು ತರಲಿ " ಎಂದು ಕೇಳಿದರೆ " ಮೂರು ಬೀಡಾ ಹಾಗೂ ಎರಡು ಲಿಂಬೆಯ ಚಾಕಲೇಟ್ ತರಿಸಿ " ಎಂದು ಮುಗ್ಧತೆಯಿಂದ ಎನ್ನುತ್ತಿದ್ದರು . ಒಮ್ಮೆ ಅಣ್ಣಪ್ಪರೊಂದಿಗೆ ತಮಾಷೆಗಾಗಿ ಅಭ್ಯಾಸವಿಲ್ಲದಿದ್ದರೂ ಹೊಗೆಸೊಪ್ಪು ಮಿಶ್ರಿತ ಬೀಡಾ ತಿಂದು ತಲೆಸುತ್ತು ಬಂದಾಗ ಅಣ್ಣಪ್ಪರೇ ನನ್ನನ್ನು ಸಂಭಾಳಿಸಿ ಇನ್ನು ಮುಂದೆ ನೀವು ಬೀಡಾ ತಿನ್ನ ಬಾರದು ಎಂದು
" ಆಜ್ಞಾಪಿಸಿದ್ದರು "
ಅಣ್ಣಪ್ಪರ ಎಲ್ಲಾ ಹಾಸ್ಯಪಾತ್ರಗಳೂ ಶ್ರೇಷ್ಡ ಮಟ್ಟದ್ದೇ . ಆದರೂ ನನಗೆ ಅತ್ಯಂತ ಇಷ್ಟವಾದದ್ದು " ದಳವಾಯಿ ದುಗ್ಗಣ್ಣ " ದ " ಕಂಪಣಮೂಲ್ಯ " ಅಮಾಯಕ ಮುಗ್ಧನ ಪಾತ್ರವದು . ಕಂಪಣನ ಮುಗ್ಧತೆಯನ್ನು ಮನಮುಟ್ಟುವಂತೆ ಚಿತ್ರಿಸಿದ್ದರು . ಈ ಪ್ರಸಂಗ ನೋಡಲು ನಾನು ಎಷ್ಟೇ ದೂರವಾದರೂ ಹೋಗುತ್ತಿದ್ದೆ , ಅಣ್ಣಪ್ಪರ " ಕಂಪಣ ಮೂಲ್ಯ " ಪಾತ್ರ ನೋಡಲು . ಆ ಪಾತ್ರ ನನ್ನನ್ನು ಅಷ್ಟು ವಶೀಕರಿಸಿತ್ತು . ಆಗೆಲ್ಲಾ ಅಣ್ಣಪ್ಪರು
'' ನೀವು ಇಷ್ಟೆಲ್ಲಾ ದೂರ ಬರಬಾರದು. ನಿಮಗೆ ನಾಳೆ ಅಂಗಡಿಯಲ್ಲಿ ವ್ಯಾಪಾರ ಮಾಡಲಿಕ್ಕಿಲ್ಲವೇ ? "
ಎಂದು ನಯವಾಗಿ ಗದರಿಸುತ್ತಿದ್ದರು .ಆದರೂ " ಕಂಪಣ ಮೂಲ್ಯ " ನನಗೆ ಮರೆಯಲು ಆಗುತ್ತಿರಲಿಲ್ಲ . ಅಣ್ಣಪ್ಪರು ಬೈಯುತ್ತಾರೆಂದು , ಎಷ್ಟೋ ಬಾರಿ , ಚೌಕಿಗೆ ಹೋಗದೇ " ದಳವಾಯಿ ದುಗ್ಗಣ್ಣ " ಪ್ರಸಂಗ ನೋಡಿ , ಅಣ್ಣಪ್ಪರಲ್ಲಿ ಮಾತಾಡದೇ ಹೋದದ್ದು ಉಂಟು .
ಅಣ್ಣಪ್ಪರ ಇನ್ನೊಂದು ಶ್ರೇಷ್ಟ ಪಾತ್ರ
" ಬೊಳ್ಳಿಗಿಂಡೆ " ಪ್ರಸಂಗದ " ಕೇಚು ". ಅರಸನ ಮಗನಾದರೂ ಹೆಡ್ಡನ ಪಾತ್ರವದು . ಇಡೀ ಸಭೆಯನ್ನು ಈ ಪಾತ್ರದ ಮೂಲಕ ಅಣ್ಣಪ್ಪರು ರಂಜಿಸುತ್ತಿದ್ದರು. ರಾ.ಸಾಮಗ , ಕೊಳ್ಳ್ಯೂರು , ಅಣ್ಣಪ್ಪರ ಜೋಡಿ ಸಂಭಾಷಣೆ ಈ ಪ್ರಸಂಗದ ಜೀವಾಳವಾಗಿತ್ತು . " ಕಾಡಮಲ್ಲಿಗೆ " ಯ ಸ್ವಾಮಿನಿಷ್ಟ ಚೋಂಕ್ರ , ಕೌಡೂರ ಬೊಮ್ಮಯ್ಯದ ಪೋಷಕ ಪಾತ್ರವಾದ ಬೊಮ್ಮಯ್ಯ ಎಲ್ಲಾ ಅಣ್ಣಪ್ಪರ ಹೆಸರನ್ನು ಆಗಸದೆತ್ತರಕ್ಕೆ ಏರಿಸಿದ ಪಾತ್ರಗಳು .
ಅರುವ ಕೊರಗಪ್ಪ ಶೆಟ್ಟರ ಋತುಪರ್ಣನಿಗೆ , ಅಣ್ಣಪ್ಪರ ಬಾಹುಕ ನನಗೆ ಅತೀ ಮೆಚ್ಚುಗೆಗೆ ಪಾತ್ರವಾದ ಇನ್ನೊಂದು ಪಾತ್ರ .
( ಹಿಂದೆ ಅಳಿಕೆ ರಾಮಯ ರೈಗಳ ಋತುಪರ್ಣನಿಗೆ ಅಣ್ಣಪ್ಪರ ಬಾಹುಕ ತುಂಬಾ ಪ್ರಸಿಧ್ಧಿಯಾಗಿತ್ತು . )
ನಾನೊಮ್ಮೆ ಬಜ್ಪೆಯ ನಮ್ಮ ಸಂಘದ ಬಯಲಾಟಕ್ಕೆ ಅಣ್ಣಪ್ಪರನ್ನು ಕರೆಸಿ ಸಂಮಾನ ಮಾಡಿದ್ದೆ . " ಭೀಷ್ಮವಿಜಯ " ಪ್ರಸಂಗ . ನನ್ನದ್ದು ಭೀಷ್ಮ , ಅಣ್ಣಪ್ಪರ ವೃಧ್ಧ ಬ್ರಾಹ್ಮಣ . ನಾನು ಬ್ರಾಹ್ಮಣನನ್ನು ಕರೆಸಿ ,
" ಅಯ್ಯಾ ಬ್ರಾಹ್ಮಣೋತ್ತಮರೇ , ಈ ಕೆಲಸಕ್ಕೆ ನೀವೇ ಅರ್ಹರು . ನಿಮ್ಮ ಪ್ರಾಯ ಹಾಗೂ ಯೋಗ್ಯತೆ ನೋಡಿ ಕೆಲವರು ನಿಮ್ಮನ್ನು ' ಅಣ್ಣಾ ' ಎಂತಲೂ , ಕೆಲವರು ' ಅಪ್ಪಾ ' ಎಂತಲೂ , ಕೆಲವರು ಎರಡನ್ನೂ ಸೇರಿಸಿ
" ಅಣ್ಣಪ್ಪ " ಎಂತಲೂ ಕರೆಯುತ್ತಾರೆ ಒಟ್ಟಿನಲ್ಲಿ ನಮ್ಮ ಸಭೆಯಲ್ಲಿ ನೀವೇ ಹಿರಿಯರು " ಎಂದೆ . ಸಬೆ ನೆಗಾಡಿತು . ಆಗ ಅಣ್ಣಪ್ಪರು
" ಹೌದು ಆಚಾರ್ಯರೇ , ಕೊಡುವವರು ಹಾಗೂ ಕೂಡುವವರು ನೀವೇ ಇರುವಾಗ ನನಗೇನು ತೊಂದರೆ " ಎಂದಾಗ ಸಭೆಯಿಡೀ ನಕ್ಕಿತು .
( ಕುಡ್ವ ಶಬ್ದವನ್ನು ಸ್ವಲ್ಪ ತಿರುಗಿಸಿ ಹೇಳಿ ಹಾಸ್ಯರಸ ಸೃಷ್ಟಿಸಿದ್ದರು . )
ಇನ್ನೊಮ್ಮೆ ಬಜ್ಪೆಯಲ್ಲಿ " ಮಾಗಧವಧೆ"
ಶೇಣಿಯವರ ಮಾಗಧ , ಅಣ್ಣಪ್ಪರ ವಿಪ್ರ ಕೃಷ್ಣ , ನಾನು ಹಾಗೂ ನನ್ನ ತಮ್ಮ ಸತೀಶ ಕುಡ್ವನದ್ದು ಬ್ರಾಹ್ಮಣ ವೇಷದ ಭೀಮಾರ್ಜುನರು .
ಅಣ್ಣಪ್ಪರು , ಶೇಣಿಯವರ
ಮಾಗಧನಲ್ಲಿ ಮಾತಾಡುತ್ತಾ ,
" ಇವರಿಬ್ಬರೂ ನನ್ನ ಶಿಷ್ಯಂದಿರು . ನೀನು ಏನೇ ಮಾತಾಡಲಿದ್ದರೂ ನನ್ನಲ್ಲೇ ಮಾತಾಡು.ಮಾತಾಡುವ ಜನರಲ್ಲ ಇವರು " ಎಂದು ಶೇಣಿಯವರಿಗೆ ಸೂಚ್ಯವಾಗಿ ತಿಳಿಸಿ ನಮ್ಮ ಮರ್ಯಾದೆ ಉಳಿಸಿದ್ದರು .
ಇದೀಗ ಮಿಜಾರಲ್ಲಿ ತಮ್ಮ ಮಗನಾದ ಉದ್ಯಮಿ ಸದಾಶಿವರ ಮನೆಯಲ್ಲಿ ನೆಲೆಸಿರುವ ಅಣ್ಣಪ್ಪರು , ಯಕ್ಷಗಾನದಿಂದ ನಿವ್ರತ್ತರಾಗಿದ್ದಾರೆ . ಇಷ್ಟು ದೀರ್ಘ ಕಾಲ ಯಕ್ಷಸೇವೆಗೈದ ಅಣ್ಣಪ್ಪರ ಪಾತ್ರಗಳ ದಾಖಲೀಕರಣವಾಗದಿರುವದು , ಯಕ್ಷರಂಗಕ್ಕಾದ ದೊಡ್ಡ ಹಿನ್ನಡೆ ಎಂದರೆ ತಪ್ಪಾಗಲಾರದು .
ಮುಖ್ಯಪ್ರಾಣ ಕಿನ್ನಿಗೋಳಿ , ಮಿಜಾರು ತಿಮ್ಮಪ್ಪ ರಂಥವರನ್ನು ಶಿಷ್ಯರನ್ನಾಗಿ ರೂಪಿಸಿದ ಅಣ್ಣಪ್ಪರು ಯಕ್ಷರಸಿಕರ ಕಣ್ಮಣಿ .
ಲಕ್ಷಾಂತರ ಯಕ್ಷಪ್ರೇಮಿಗಳನ್ನು ನಗುವಂತೆ ಮಾಡಿದ, ಅಣ್ಣಪ್ಪರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ, ಎಂದು ಪ್ರಾರ್ಥನೆ .
ಎಂ. ಶಾಂತರಾಮ ಕುಡ್ವ ,

" ಶ್ರೀದೇವಿಮಹಾತ್ಮೆ "

ಬೆಳಿಗ್ಗೆ ಮನು ಎಡಪದವ್ ಇವರು ವೇದಿಕೆಯಲ್ಲಿ " ಶ್ರೀದೇವಿಮಹಾತ್ಮೆ " ಪ್ರಥಮವಾಗಿ ಎಲ್ಲಿ ಪ್ರದರ್ಶಿತವಾಗಿತ್ತು ಎಂಬ ಪ್ರಶ್ಣೆಯನ್ನು ಕೇಳಿದ್ದರು . ನನಗೆ ತಿಳಿದ ಮಾಹಿತಿಯನ್ನು ಸದಸ್ಯರಿಗಾಗಿ ಹಂಚುತ್ತಿದ್ದೇನೆ .
ಸುಮಾರು ೧೯೩೦ರಲ್ಲಿ , ಕಾಸರಗೋಡು ಸಮೀಪ
" ಕೊರಕ್ಕೋಡು " ಎಂಬಲ್ಲಿ ಕೊರಕ್ಕೋಡು ಎಂಬ ಮೇಳವಿತ್ತು. ಆ ಮೇಳದ ಯಜಮಾನರಾದ ಶ್ರೀ ದೇವಪ್ಪ ಮೇಸ್ತ್ರಿಯವರಿಗೆ ಏಳು ದಿನಗಳ ಕಾಲ " ಶ್ರೀದೇವಿಮಹಾತ್ಮೆ " ಆಟ ಆಡಿಸಬೇಕೆಂದು ಇಚ್ಛೆಯಾಯಿತು.
ಆದರೆ , " ಶ್ರೀದೇವಿಮಹಾತ್ಮೆ " ಪ್ರಸಂಗ ಪುಸ್ತಕ ಬರೆದಿರದ ಕಾಲವದು. ಆ ಕಾರಣಕ್ಕಾಗಿ ದೇವಪ್ಪ ಮೇಸ್ತ್ರಿಗಳು ಆ ಕಾಲದ ಸುಪ್ರಸಿಧ್ಧ ಭಾಗವತರೂ , ಆಶುಕವಿಗಳೂ ಆದ ಶ್ರೀ ಮಾಂಬಾಡಿ ನಾರಾಯಣ ಭಾಗವತರಲ್ಲಿ ಬಂದು
" ನೀವೇ ಈ ಪ್ರಸಂಗ ಮುನ್ನಡೆಸಿ ಕೊಡಬೇಕು " ಎಂದು ಕೇಳಿಕೊಂಡರು.
ಮಾಂಬಾಡಿಯವರೂ , ಶ್ರೀದೇವಿಯ ಸೇವೆ ಎಂದು ಒಪ್ಪಿದರು. ಆ ಕಾಲದಲ್ಲಿ ಭಾಗವತರಾಗಿ ಮೆರೆದಿದ್ದ ಶ್ರೀ ಜತ್ತಿ ಈಶ್ವರ ಭಾಗವತರಿಂದ ದೇವಿಮಹಾತ್ಮೆ
ಯ ಕಥೆ ಕೇಳಿದ ಮಾಂಬಾಡಿಯವರು ಸ್ವಂತ ಕಲ್ಪನೆ ಯಿಂದ ಪದಗಳನ್ನು ಬರೆದರು .
ಏಳು ದಿನಗಳ " ಶ್ರೀದೇವಿಮಹಾತ್ಮೆ " ಪ್ರಾರಂಭವಾಯಿತು. ಮೊದಲ ದಿನ ಮೇಳದ ಭಾಗವತರಾದ ಪೆರಿಯಪ್ಪಾಡಿ ಪರಮೇಶ್ವರ ಭಾಗವತರು ಹಾಡಿದರು. ನಂತರದ ದಿನಗಳಲ್ಲಿ ಮಾಂಬಾಡಿ ನಾರಾಯಣ ಭಾಗವತರೇ ಪ್ರಸಂಗವನ್ನು ಮುನ್ನಡೆಸಿದರು. ಏಳೂ ದಿನಗಳ ಕಾಲ ಮಾಂಬಾಡಿಯವರು ಪರಿಶುಧ್ಧ ವೃತ ನಿಯಮದಲ್ಲಿದ್ದರಲ್ಲದೇ , ಎಲ್ಲಾ ಕಲಾವಿದರೂ , ಅದೇ ಶುಧ್ಧ ನಿಯಮ ಪಾಲಿಸಬೇಕೆಂದು ಆಜ್ಞಾಪಿಸಿದ್ದರು .
ಹೀಗೆ , ಪ್ರಪ್ರಥಮವಾಗಿ
" ಶ್ರೀದೇವಿಮಹಾತ್ಮೆ " ಕೊರಕ್ಕೋಡಿನಲ್ಲಿ ಏಳು ದಿನಗಳ ಕಾಲ ದಿನಕ್ಕೊಂದು ಆಖ್ಯಾನದಂತೆ , ಪ್ರದರ್ಶನಗೊಂಡಿತು. ಜತ್ತಿ ಈಶ್ವರ ಭಾಗವತರು ಏಳೂ ದಿನವೂ ತಮ್ಮ ಧರ್ಮಪತ್ನಿಯೊಂದಿಗೆ ಎದುರಿನ ಆಸನದಲ್ಲಿ ಪ್ರೇಕ್ಷಕರಾಗಿ ಪ್ರದರ್ಶನ ನೋಡಿ ಪ್ರೋತ್ಸಾಹಿಸಿದ್ದರು .
ಅಂದು " ಶ್ರೀದೇವಿ " ಯ ಪಾತ್ರ ನಿರ್ವಹಿಸಿದವರು ಅಂದಿನ ಕಾಲದ ಸುಪ್ರಸಿಧ್ಧ ಕಲಾವಿದರಾಗಿದ್ದ
ಶ್ರೀ ಪಾಣಾಜೆ ಗಣಪತಿ ಭಟ್ಟರು
( ಯಕ್ಷರಂಗದ ಪ್ರಪ್ರಥಮ ಶ್ರೀದೇವಿ ಪಾತ್ರಧಾರಿ ) , ಮಹಿಷಾಸುರನಾಗಿ ಕಾಣಿಸಿಕೊಂಡವರು ಸುಪ್ರಸಿಧ್ಧ ಬಣ್ಣದ ವೇಷಧಾರಿಯಾಗಿದ್ದ " ಬಣ್ಣದ ಕುಂಞ "
ರವರು ( ಪ್ರಪ್ರಥಮ ಮಹಿಷ ಪಾತ್ರಧಾರಿ )
ಹೀಗೆ " ಪ್ರಪ್ರಥಮ ಶ್ರೀದೇವಿ ಮಹಾತ್ಮೆ " ಪ್ರಸಂಗ ಏಳುದಿನಗಳ ಕಾಲ ಕೊರಕ್ಕೋಡಿನಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿತು .
ಕೊರಕ್ಕೋಡಿನಲ್ಲಿ ಯಶಸ್ವಿಯಾಗಿ ಜರಗಿದ " ಶ್ರೀ ದೇವಿ ಮಹಾತ್ಮೆ " ಯ ವಿಷಯ ಆಗಿನ ಶ್ರೀ ಕ್ಷೇತ್ರ ಕಟೀಲಿನ ಮೊಕ್ತೇಸರರಾದ ಶ್ರೀಧರ ಶೆಟ್ಟಿಯವರು ಅರಿತು, ಅವರೂ ಕಟೀಲು ಮೇಳದ ವತಿಯಿಂದ " ಶ್ರೀದೇವಿಮಹಾತ್ಮೆ " ಆಟ ಆಡಿಸಲು ನಿರ್ಧರಿಸಿದರು .ದಿ. ಕಲ್ಲಾಡಿ ಕೊರಗ ಶೆಟ್ಟರು ಶ್ರೀಕ್ಷೇತ್ರದ ಮೇಳದ ವ್ಯವಸ್ತಾಪಕತ್ವ ವಹಿಸಿದ್ದ ಕಾಲವದು .ಶ್ರೀಧರ ಶೆಟ್ಟರ ಮುತುವರ್ಜಿಯಲ್ಲಿ , ಅರ್ಚಕರಾದ ಅಸ್ರಣ್ಣ ಬಂಧುಗಳ ಪ್ರೋತ್ಸಾಹದೊಂದಿಗೆ ೧೯೪೧ ರಲ್ಲಿ , ಕಿನ್ನಿಗೋಳಿಯಲ್ಲಿ ೫ ದಿವಸಗಳ ಕಾಲ
" ಶ್ರೀದೇವಿಮಾತ್ಮೆ " ಆಡಿಸಿದರು .
ಆದರೆ , ಮೇಳದ ಭಾಗವತರು ಆಡಿಸಲು ಹಿಂಜರಿದಾಗ ಮಾಂಬಾಡಿ ನಾರಾಯಣ ಭಾಗವತರನ್ನೇ ಕರೆಸಿ ಆಟವನ್ನು ಪ್ರದರ್ಶಿಸಿದರು. ಮಾಂಬಾಡಿಯವರು " ಶ್ರೀಸಪ್ತಶತಿ ಗೃಂಥ " ವನ್ನು ಆಧರಿಸಿ " ಶ್ರೀದೇವಿ ಮಹಾತ್ಮೆ " ಆಟವನ್ನು ಆಡಿಸಿದ್ದರು . ಈಗಿನ " ಶ್ರೀದೇವಿಮಹಾತ್ಮೆ " ತ್ರಿಮೂರ್ತಿಗಳ ಹುಟ್ಟಿನೊಂದಿಗೆ ಕಥೆ ಪ್ರಾರಂಭವಾಗುವದು .( ಇದು ಬಲಿಪ ಭಾಗವತರ ಪ್ರಸಂಗ ) ಆದರೆ , ಅಂದು ಮಾಂಬಾಡಿಯವರ ಐದು ದಿನಗಳ ಶ್ರೀದೇವಿಮಹಾತ್ಮೆಯು ಸುರಥನ ಒಡ್ಡೋಲಗದಿಂದ ಪ್ರಾರಂಭವಾಗುತ್ತಿತ್ತು.
ಅಂದು " ಶ್ರೀದೇವಿ " ಯಾಗಿ ಮಿಂಚಿದವರು ಶ್ರೀ ಕಡಂದೇಲು ಪುರುಷೋತ್ತಮ ಭಟ್ಟರು . ನಂತರದ ದಿನಗಳಲ್ಲಿ ಕಡಂದೇಲುರವರೇ ಶ್ರೀದೇವಿಯಾಗಿ ವಿಜೃಂಭಿಸಿದ್ದುದು ಈಗ ಇತಿಹಾಸ.
ಅಂದು ಐದು ದಿನಗಳ
" ಶ್ರೀದೇವಿಮಹಾತ್ಮೆ " ಯ ಕೊನೆಯ ದಿನ " ಅರುಣಾಸುರ ವಧೆ " ಯನ್ನೂ ಸೇರಿಸಿದ್ದರು .
ಈ ಐದೂ ದಿನಗಳ ಕಾಲ ಮಾಂಬಾಡಿ ಭಾಗವತರು ಪರಿಶುಧ್ಧ ವೃತನಿಷ್ಟರಾಗಿ , ಒಪ್ಪೊತ್ತಿನ ಊಟ ಮಾತ್ರ ಮಾಡಿ ಹಗಲಿನಲ್ಲಿ ಕಟೀಲಿನ ಶ್ರೀದೇವಿಯ ಪರಮ ಪವಿತ್ರ ಸನ್ನಿಧಾನದಲ್ಲಿ ಏಕಾಂತವಾಗಿ ಧ್ಯಾನ ಮಾಡುತ್ತಿದ್ದರಂತೆ . ಕಡಂದೇಲು ಹಾಗೂ ಇತರ ಕಲಾವಿದರೂ , ವೃತಧಾರಿಗಳಾಗಿ ಪಾತ್ರ ನಿರ್ವಹಿಸಿದ್ದರು. ಈ ಐದು ದಿವಸಗಳ
" ಶ್ರೀದೇವಿಮಹಾತ್ಮೆ " ಯಜ್ಞಫಲವನ್ನು ಕೊಟ್ಟಿತ್ತು .ಅಂದು, ಕಿನ್ನಿಗೋಳಿಯಲ್ಲಿ ಚೌಕಿಯಾಗಿ
ಮೇಳದ " ಶ್ರೀದೇವರು " ವಿರಾಜಮಾನರಾದ ಅದೇ ಸ್ತಳ ಇಂದು
" ಶ್ರೀ ರಾಮಮಂದಿರ " ವಾಗಿ ಕಂಗೊಳಿಸುತ್ತಿರುವದು
" ಶ್ರೀದೇವಿಮಹಾತ್ಮೆ " ಪ್ರಸಂಗದ
" ಮಹಾತ್ಮೆ " ಯಿಂದಲೇ ಎಂದು ಭಕ್ತರ ಅಂಬೋಣ.
ಎಂ. ಶಾಂತರಾಮ ಕುಡ್ವ
ಮೂಡಬಿದಿರೆ .

ಕೆ.ಶಿವರಾಮ ಜೋಗಿ , ಬಿ.ಸಿ.ರೋಡ್

ಎಂ. ಶಾಂತರಾಮ ಕುಡ್ವ
ಮೂಡಬಿದಿರೆ
______________________________
ಕೆ.ಶಿವರಾಮ ಜೋಗಿ , ಬಿ.ಸಿ.ರೋಡ್
ತಮ್ಮ ಯಕ್ಷ ತಿರುಗಾಟದ ೬೦ ನೇ ವರ್ಷಾಚರಣೆಯಲ್ಲಿ .
ಗುರುವಪ್ಪ ಜೋಗಿ - ಸೀತಮ್ಮ ದಂಪತಿಗಳ ಸುಪುತ್ರರಾಗಿ ೦೭.೦೬.೧೯೪೧ ರಂದು ಶಿವರಾಮ ಜೋಗಿಯವರ ಜನನವಾಯಿತು.ಸುಪ್ರಸಿಧ್ಧ ಯಕ್ಷಗಾನ ಕಲಾವಿದರಾದ ಕುಡಾಣ ಗೋಪಾಲಕೃಷ್ಣ ಭಟ್ , ವಿಟ್ಲ ಗೋಪಾಲಕೃಷ್ಣ ಜೋಷಿಯವರಲ್ಲಿ ಶಿಷ್ಯರಾಗಿ ನಾಟ್ಯಾಭ್ಯಾಸ ಪಡೆದು ಅರ್ಥಗಾರಿಕೆಯನ್ನು ಶೇಣಿ ಗೋಪಾಲಕೃಷ್ಣ ಭಟ್ಟರ ಶಿಷ್ಯರಾಗಿ ಕಲಿತರು . ( ಮೂವರು ಗುರುಗಳ ಹೆಸರೂ ಗೋಪಾಲಕೃಷ್ಣ )
ತಮ್ಮ ೧೫ ನೇ ಪ್ರಾಯದಲ್ಲಿ ಕೂಡ್ಲು ಮೇಳ ಸೇರಿ , ನಂತರ ಮೂಲ್ಕಿ ಮೇಳ ಸೇರಿದರು . ನಂತರ ಸುರತ್ಕಲ್ ಮೇಳ ಸೇರಿದ ಜೋಗಿಯವರಿಗೆ , ಸುರತ್ಕಲ್ ಮೇಳ ತಮ್ಮ ಅಪ್ರತಿಮ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಯಿತು . ಸುಪ್ರಸಿಧ್ಧ ಕಲಾವಿದರಾದ ಅಗರಿ ಶ್ರೀನಿವಾಸ ಭಾಗವತರು , ಅಗರಿ ರಘುರಾಮ ಭಾಗವತರು , ಪದ್ಯಾಣ ಗಣಪತಿ ಭಟ್ , ಶಂ.ನಾ. ಸಾಮಗ , ಶೇಣಿ , ತೆಕ್ಕಟ್ಟೆ , ರಾ .ಸಾಮಗ , ವಿಟ್ಲ ಜೋಷಿ , ಕುಂಬ್ಳೆ , ಗೋ. ಭಟ್ , ಕ್ರಿಶ್ಚನ್ ಬಾಬು , ಕೊಳ್ಯೂರು, ಕೊಕ್ಕಡ, ರಮೇಶಾಚಾರ್ಯ , ವೇಣೂರು, ಜಲವಳ್ಳಿ , ವಾ.ಸಾಮಗ ಮುಂತಾದ ಕಲಾವಿದರ ಒಡನಾಟ ದೊರಕಿತು. ಸುರತ್ಕಲ್ ಮೇಳ ತನ್ನ ತಿರುಗಾಟ ನಿಲ್ಲಿಸುವ ತನಕ ೪೦ ವರ್ಷಗಳ ತಿರುಗಾಟವನ್ನು ಮಾಡಿ ಸುರತ್ಕಲ್ ಮೇಳದ ಯಜಮಾನರಾದ ಕಸ್ತೂರಿ ಪೈ ಸಹೋದರರ ಪ್ರೀತಿಪಾತ್ರರಾದ ಕಲಾವಿದ ಎಂಬ ಹೆಸರು ಗಳಿಸಿದರು. ಉತ್ತಮ ವಾಹನ ಚಾಲಕರಾಗಿದ್ದ ಜೋಗಿಯವರು ಮೇಳದ ವಾಹನವನ್ನು ತಾವೇ ಚಲಾಯಿಸುತ್ತಿದ್ದರು . ಮಳೆಗಾಲದಲ್ಲಿ ಬಸ್ ಚಾಲಕರಾಗಿ ದುಡಿಯುತ್ತಿದ್ದರು . ಸುರತ್ಕಲ್ ಮೇಳಕ್ಕೆ ಹಾಗೂ ಯಜಮಾನರಾದ ವರದರಾಯ ಪೈಗಳ ನಿಷ್ಟಾವಂತ ಕಲಾವಿದರಾಗಿದ್ದರು .
ಸುರತ್ಕಲ್ ಮೇಳ ಘಟ್ಟ ಪ್ರದೇಶದಲ್ಲಿ ಅಪಾರ ಪ್ರಸಿಧ್ಧಿ ಪಡೆದ ಮೇಳ . ಘಟ್ಟದ ಪ್ರೇಕ್ಷಕರು , ಸುರತ್ಕಲ್ ಮೇಳವನ್ನು ಭಕ್ತಿಯಿಂದ ಕಾಣುವವರು. ಒಮ್ಮೆ ಘಟ್ಟದ ತಿರುಗಾಟದ ಸಮಯದಲ್ಲಿ ಡೇರೆ ಭರ್ತಿಯಾಯಿತು . ಆಗ ಕೆಲ ಒರಟು ಸ್ವಭಾವದ ಪ್ರೇಕ್ಷಕರು , ತಮಗೆ ಟಿಕೇಟ್ ಸಿಗಲಿಲ್ಲ ಎಂಬ ಕಾರಣದಿಂದ ಚೌಕಿಗೆ ಬಂದು ಗಲಭೆ ಎಬ್ಬಿಸಿದರು. ಪ್ರದರ್ಶನ ನಿಲ್ಲುವ ಹಂತ ಮುಟ್ಟಿದಾಗ ಶಿವರಾಮ ಜೋಗಿ ಹಾಗೂ ಮೇಳದ ಇನ್ನೋರ್ವ ನಿಷ್ಟಾವಂತ ಕಲಾವಿದರಾದ , ಈಗ ಯಕ್ಷಗಾನದಿಂದ ನಿವೃತ್ತರಾದರೂ , ಮೂಡಬಿದಿರೆ ಸುತ್ತಮುತ್ತ ಯಕ್ಷಗಾನೀಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ , ನನ್ನ ಸನ್ಮಿತ್ರರಾದ ಪುತ್ತಿಗೆ ಕುಮಾರ ಗೌಡರು , ಆಟಕ್ಕೆ ಬಳಸುವ ಖಡ್ಗವನ್ನು ಹಿಡಿದು , ಕೋಟಿ ಚೆನ್ನಯರಂತೆ ಆ ಒರಟರನ್ನು ಎದುರಿಸಲು ಮುಂದಾದಾಗ, ಆ ಒರಟರು ಹೆದರಿ ಪಲಾಯನ ಮಾಡಿದ್ದರು . ಪ್ರದರ್ಶನ ಮುಂದುವರಿಯಿತು .
( ಈ ಪ್ರಕರಣವನ್ನು ವರದರಾಯ ಪೈಗಳೇ ನನ್ನಲ್ಲಿ ತಿಳಿಸಿದ್ದರು )
ಜೋಗಿಯವರು ಪ್ರಾರಂಭದಲ್ಲಿ ಪುಂಡು ವೇಷಗಳಲ್ಲಿ ಮಿಂಚಿ ಅಪಾರ ಹೆಸರು ಗಳಿಸಿದವರು. ದಿನಂಪ್ರತೀ ಕನಿಷ್ಟ ನೂರು " ಧಿಗಿಣ " ಹೊಡೆಯದೇ ರಂಗದಿಂದ ಹೊರ ಬರುತ್ತಿರಲಿಲ್ಲ. ಅಭಿಮನ್ಯು, ಲೀಲೆಯ ಕೃಷ್ಣ ,
ಬಬ್ರುವಾಹನ, ಕುಶ, ಚಂಡ, ಭಾರ್ಗವ ಮುಂತಾದ ಪಾತ್ರಗಳು ಜೋಗಿಯವರ " ಮಾಸ್ಟರ್ ಪೀಸ್ " ಆಗಿತ್ತು .
ಪುರಾಣಗಳ ಬಗ್ಗೆ ಇರುವ ಅಪಾರ ಜ್ಞಾನ , ದೈವದತ್ತವಾಗಿ ಬಳುವಳಿಯಾಗಿ ಬಂದ ಕಂಚಿನ ಕಂಠ, ಆಕರ್ಷಕ ರೂಪ , ಉತ್ತಮ ಅಂಗಸೌಷ್ಟವ , ಶಾಸ್ತ್ರೀಯವಾದ ಯಕ್ಷಗಾನ ನಾಟ್ಯ , ಶೃತಿಬಧ್ಧವಾಗಿರುವ ನಿರರ್ಗಳ ಮಾತುಗಾರಿಕೆ , ಸಂಗೀತದ ಜ್ಞಾನ ಎಲ್ಲಾ ಸೇರಿ ಜೋಗಿಯವರು ವಿಜೃಂಭಿಸಿದರು . ಅಭಿಮನ್ಯು, ಬಬ್ರುವಾಹನ , ಕುಶ, ಚಂಡ, ಭಾರ್ಗವ ಮುಂತಾದ ಪಾತ್ರಗಳು ಜೋಗಿಯವರಿಗೆ ಅಪಾರ ಪ್ರಸಿಧ್ಧಿ ತಂದು ಕೊಟ್ಟಿವೆ. ನಕ್ಷತ್ರಿಕ , ವಿಶ್ವಾಮಿತ್ರ , ಕೌಶಿಕ, ಋತುಪರ್ಣ, ವಾಲಿ ,ರಾವಣ, ದೇವವೃತ, ಭೀಷ್ಮ , ಹನೂಮಂತ , ಇಂದ್ರಜಿತು, ಶಿಶುಪಾಲ , ಕೌಂಡ್ಲಿಕ , ಕರ್ಣ , ಭೃಗು , ಶನೀಶ್ವರ , ಪಾಪಣ್ಣ ವಿಜಯದ ಚಂದ್ರಸೇನ ಮುಂತಾದ ವಿಭಿನ್ನ ಪಾತ್ರಗಳಲ್ಲಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಾರೆ . ಇಪ್ಪತ್ತು ವರ್ಷಗಳ ಹಿಂದೆ, ಸುರತ್ಕಲ್ ಮೇಳದಲ್ಲಿರುವಾಗ ಸುಪ್ರಸಿಧ್ಧ ಪುಂಡು ವೇಷಧಾರಿಯಾಗಿದ್ದ ವೇಣೂರು ಸದಾಶಿವ ಕುಲಾಲರೊಂದಿಗೆ ( ಇವರೂ ಈಗ ಹೊಸನಗರ ಮೇಳದಲ್ಲಿದ್ದಾರೆ ) ಜೋಡಿ ಪುಂಡು ವೇಷಧಾರಿಯಾಗಿ , ಕುಲಾಲರು ನೂರಕ್ಕೂ ಮಿಕ್ಕಿ " ಧಿಗಿಣ " ಹೊಡೆದಾಗ ಜೋಗಿಯವರೂ , ಅಷ್ಟೇ ಧಿಗಿಣ ಹೊಡೆದು ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದ್ದರು. ( ಆಗ ಜೋಗಿಯವರಿಗೆ ೫೫ ವರ್ಷ ಪ್ರಾಯ )
ಕಿರಾತ ಶ್ರೀನಿವಾಸ , ಕುಮಾರರಾಮ, ವೀರಚಂದ್ರ ಮುಂತಾದ ಪಾತ್ರಗಳಿಗೆ ಮೂಲಚಿತ್ರಣ ಕೊಟ್ಟವರು ಜೋಗಿಯವರೇ .ಈ ಪಾತ್ರಗಳು ಜೋಗಿಯವರ ಪ್ರತಿಭಾ ಸಾಮರ್ಥ್ಯಕ್ಕೆ ದ್ಯೋತಕವಾಗಿವೆ .
ಸುರತ್ಕಲ್ ಮೇಳದವರಿಂದ ಯಶಸ್ವಿಯಾಗಿ ಪ್ರದರ್ಶಿಸಲ್ಪಟ್ಟ ಇನ್ನೊಂದು ಪ್ರಸಂಗ " ಶ್ರೀ ಶನೀಶ್ವರ ಮಹಾತ್ಮೆ " ಈ ಪ್ರಸಂಗದಲ್ಲಿ ಶೇಣಿಯವರ ಧೀರೋದ್ದಾತ ನಿಲುವಿನ ವಿಕ್ರಮಾದಿತ್ಯ ಹಾಗೂ ಜಲವಳ್ಳಿಯವರ ಪೀಡಕ ವ್ಯಕ್ತಿತ್ವದ ಶನೀಶ್ವರನ ಪಾತ್ರಗಳು ಅಪಾರ ಜನಪ್ರಿಯತೆ ಗಳಿಸಿತ್ತು . ಮುಂದೆ ಜಲವಳ್ಳಿಯವರು ಸುರತ್ಕಲ್ ಮೇಳ ಬಿಟ್ಟ ನಂತರ ಶನೀಶ್ವರನ ಪಾತ್ರವನ್ನು ಜೋಗಿಯವರು ಸಮರ್ಥವಾಗಿ ನಿರ್ವಹಿಸಿದ್ದರು.
ತುಳುಪ್ರಸಂಗಗಳು ಯಕ್ಷರಂಗಕ್ಕೆ ಪ್ರವೇಶವಾದ ಘಟ್ಟದಲ್ಲಿ ಕೋಟಿ , ಚೆನ್ನಯ, ದೇವುಪೂಂಜ, ಕಾಂತಬಾರೆ, ಕೋರ್ದಬ್ಬು ಮುಂತಾದ ಪಾತ್ರಗಳನ್ನು ಅತ್ಯಂತ ಚೆನ್ನಾಗಿ ನಿರ್ವಹಿಸಿದರು. ಕಾಲ್ಪನಿಕ ತುಳು ಪ್ರಸಂಗಗಳಲ್ಲಿ ಖಳ ಹಾಗೂ ನಾಯಕ ಪಾತ್ರಗಳಲ್ಲಿ ಏಕಪ್ರಕಾರವಾಗಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು .ಪಾತ್ರಗಳನ್ನು ಹೊಂದಿಕೊಂಡು ಸ್ವರದ ಏರಿಳಿತಗಳನ್ನು ಹೊಂದಿಸಿ ಮಾತಾಡುವ , ಪಾತ್ರದ ಹೊರ ಒಳಗನ್ನು ಅರಿತು ನಿರ್ವಹಣೆ ಮಾಡುವ ಕಲೆಯಲ್ಲಿ ಸಿಧ್ಧ ಹಸ್ತರು ಜೋಗಿಯವರು.
ಶೇಣಿಯವರೇ ಮೂಲಚಿತ್ರಣ ಕೊಟ್ಟ
" ಬಪ್ಪಬ್ಯಾರಿ " ಪಾತ್ರ ವನ್ನು ಶೇಣಿಯವರು ಸುರತ್ಕಲ್ ಮೇಳದಿಂದ ನಿವೃತ್ತರಾದ ನಂತರ , ಶೇಣಿಯವರದ್ದೇ ಸೂಚನೆಯಂತೆ ಜೋಗಿಯವರೇ , ನಿರ್ವಹಿಸಿ , ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದ್ದರು. ಒಮ್ಮೆ ಬಜ್ಪೆಯಲ್ಲಿ ಯಕ್ಷಗಾನ ಕಲಾವಿದರಾದ ಬಜ್ಪೆ ದೇರಣ್ಣರವರು ಮಳೆಗಾಲದಲ್ಲಿ
" ಬಪ್ಪನಾಡು ಕ್ಷೇತ್ರ ಮಹಾತ್ಮೆ " ಟಿಕೇಟಿನ ಆಟವನ್ನು ಸಂಯೋಜಿಸಿದ್ದರು
" ಅಗರಿ ಶ್ರೀನಿವಾಸ ಭಾಗವತರ ಹಾಡು ಹಾಗೂ ಶೇಣಿಯವರ ಬಪ್ಪಬ್ಯಾರಿ ನೋಡಲು ಮರೆಯದಿರಿ "
ಎಂದು ವಿಶೇಷ ಆಕರ್ಷಣೆಯಾಗಿ ಕರಪತ್ರದಲ್ಲಿ ನಮೂದಿಸಿದ್ದರು. ಆದರೆ , ಅಂದು ಶೇಣಿಯವರು ತೀವೃ ಅನಾರೋಗ್ಯದಿಂದಾಗಿ ಬರಲಾಗಲಿಲ್ಲ. ಆದರೆ , ಅಗರಿಯವರು ಶೇಣಿಯವರ ಹೊರತಾಗಿ ಬೇರಾರದೇ ಬಪ್ಪಬ್ಯಾರಿಗೆ ಪದ್ಯ ಹೇಳುವವರಲ್ಲ . ಶೇಣಿಯವರಿಲ್ಲದ ಕಾರಣ ತಾನೂ ಹೊರಡುವದಾಗಿ ಅಗರಿಯವರಿಂದ ಸೂಚನೆ ಬಂತು . ಕಂಗಾಲಾದ ದೇರಣ್ಣರವರು ಅಳುವದೊಂದೇ ಬಾಕಿ. ಅಗರಿಯವರು ನನ್ನ ತಂದೆಯವರಾದ ದಿ. ಸುಂದರ ಕುಡ್ವರ ಆತ್ಮೀಯರು. ಅಗರಿಯವರು ಆ ದಿನ ನಮ್ಮ ಮನೆಯಲ್ಲೇ ಊಟ ಮಾಡಿ ನನ್ನ ತಂದೆಯವರೊಂದಿಗೆ ಮಾತಾಡುತ್ತಿದ್ದರು. ಆಗ ಬಂದ ದೇರಣ್ಣರು ನನ್ನ ತಂದೆಯವರಲ್ಲಿ ವಿಷಯ ತಿಳಿಸಿ , ಅಗರಿಯವರನ್ನು ಒಪ್ಪಿಸಲು ಕೇಳಿಕೊಂಡರು. ಕೊನೆಗೆ ತಂದೆಯವರ ಸಂಧಾನದಿಂದ ಅಗರಿಯವರು ಒಂದು ಷರ್ತದ ಮೇರೆಗೆ ಭಾಗವತಿಕೆಗೆ ಒಪ್ಪಿದರು .
" ಶಿವರಾಮ ಜೋಗಿ ಬಪ್ಪಬ್ಯಾರಿ ಮಾಡುವದಾದರೆ ನಾನು ಪದ್ಯ ಹೇಳುತ್ತೇನೆ . ಬೇರೆ ಯಾರದ್ದೇ ಆದರೂ ನನ್ನಿಂದ ಸಾಧ್ಯವಿಲ್ಲ "
ಕೊನೆಗೆ ಅದೇ ರೀತಿ ಜೋಗಿಯವರೇ ಬಪ್ಪಬ್ಯಾರಿ ಪಾತ್ರ ವಹಿಸಿ , ಆಟ ನೆರವೇರಿತು.
ಈ ಘಟನೆ ಯಾಕೆ ಉಲ್ಲೇಖಿಸಿದೆನೆಂದರೆ ಜೋಗಿಯವರ ಪ್ರತಿಭೆಯ ಬಗ್ಗೆ ಅಗರಿಯವರಿಗೆ ಇರುವ ಅಭಿಮಾನ ತಿಳಿಸಲು .
ಕಳೆದ ಹತ್ತು ವರ್ಷಗಳಿಂದ ಜೋಗಿಯವರು ತೆಂಕುತಿಟ್ಟಿನ ಪ್ರಸಿಧ್ಧ ಮೇಳವಾದ ಹೊಸನಗರ ಮೇಳದ ಪ್ರಧಾನ ಕಲಾವಿದರಾಗಿದ್ದಾರೆ .
ಈ ವರ್ಷ ತಮ್ಮ ನಿರಂತರ ತಿರುಗಾಟದ " ೬೦ " ನೇ ವರ್ಷದ ಹೊಸ್ತಿಲಲ್ಲಿ ಜೋಗಿಯವರಿದ್ದಾರೆ . ಧರ್ಮಪತ್ನಿಯಾದ ಶ್ರೀಮತಿ ಲತಾ ಹಾಗೂ ಪುತ್ರಿ ಸೌಮ್ಯಾ ಹಾಗೂ ಪುತ್ರ ಸುಮಂತ್ ರಾಜ್ ರೊಂದಿಗೆ ಬಿ.ಸಿ.ರೋಡ್ ಊರಲ್ಲಿ ವಾಸಿಸುತ್ತಿದ್ದಾರೆ .
ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ,
ಡಾ|ಕೀಲಾರು ಪ್ರಶಸ್ತಿ , ಡಾ| ಶೇಣಿ ಪ್ರಶಸ್ತಿ , ಕುರಿಯ ಪ್ರಶಸ್ತಿ , ಕನ್ನಡ ಮತ್ತು ಸಂಸ್ಕ್ರತಿ ಪ್ರಶಸ್ತಿ ಸಹಿತ ನೂರಕ್ಕೂ ಮಿಕ್ಕಿ ಸಂಮಾನ ಸ್ವೀಕರಿಸಿದ ಜೋಗಿಯವರಿಗೆ ಇನ್ನಷ್ಟು ಪ್ರಶಸ್ತಿ , ಸಂಮಾನಗಳು ದೊರಕಲಿ ಎಂದು ಹಾರೈಸುತ್ತೇನೆ .
ಎಂ. ಶಾಂತರಾಮ ಕುಡ್ವ
ಮೂಡಬಿದಿರೆ






ನಾನು ನಿನ್ನೆ ಮೂಡಬಿದಿರೆಯಲ್ಲಿ ಹೊಸನಗರ ಮೇಳದವರ " ಶ್ರೀನಿವಾಸ ಕಲ್ಯಾಣ " ಪ್ರಸಂಗ ನೋಡಿದೆ. ಸಂಘಟಕರು ನನ್ನಲ್ಲಿ ಸಮಾಲೋಚಿಸಿ ಆ ಪ್ರಸಂಗ ಇಟ್ಟಿದ್ದರು .ಆದರೆ ನಿನ್ನೆ ೭ ಮಂದಿ ಕಲಾವಿದರು ರಜೆಯಲ್ಲಿದ್ದ ಕಾರಣ , ಪಾತ್ರಗಳೆಲ್ಲಾ ಬದಲಾಗಿ ಹೊಸನಗರ ಮೇಳದ ಹಿರಿಯ ಕಲಾವಿದರಾದ ಶಿವರಾಮ ಜೋಗಿಯವರಿಗೆ " ಕಿರಾತ ಶ್ರೀನಿವಾಸ " ಎಂದು ಮೊದಲ ದಿನವೇ ಮೆನೇಜರ್ ತಿಳಿಸಿದ್ದರು. ಆ ಕಾರಣ ನಾನು ನಿನ್ನೆ ಎಲ್ಲಾ ಕೆಲಸ ಬದಿಗಿರಿಸಿ ಆಟಕ್ಕೆ ಹೋದೆ.ಶಿವರಾಮ ಜೋಗಿಯವರ ಕಿರಾತ ಪಾತ್ರ ನೋಡಬೇಕೆಂದು ಎಷ್ಟೋ ದಿನಗಳಿಂದ ನಾನು ಹಂಬಲಿಸಿದ್ದೆ . ಕಳೆದ ತಿಂಗಳು ಅಲಂಗಾರಿನ ಆಟದಂದೂ ನಾನು ಜೋಗಿಯವರಲ್ಲಿ ಈ ಅಭಿಪ್ರಾಯ ತಿಳಿಸಿದ್ದೆ .ಆಗ ಜೋಗಿಯವರು ,
" ಏನು ಮಾಡುವದು ಕುಡ್ವರೇ , ನನಗೆ ಪ್ರಾಯವಾಯಿತಲ್ಲಾ " ಎಂದಿದ್ದರು.
ನನಗೆ ಜೋಗಿಯವರ ಕಿರಾತ ಪಾತ್ರ ನೋಡಬೇಕೆಂಬ ಹಂಬಲ ಮೂಡಿದ್ದೇಕೆಂದರೆ , ಜೋಗಿಯವರ ಈ ಪಾತ್ರವನ್ನು ಎಷ್ಟೋ ಬಾರಿ ನೋಡಿದವ ನಾನು.
ಅಗರಿ ಶ್ರೀನಿವಾಸ ಭಾಗವತರಿಂದ ರಚಿಸಲ್ಪಟ್ಟ " ಶ್ರೀ ತಿರುಪತಿ ಕ್ಷೇತ್ರ ಮಹಾತ್ಮೆ " ಸುರತ್ಕಲ್ ಮೇಳದವರಿಂದ ಯಶಸ್ವಿಯಾಗಿ ಪ್ರದರ್ಶಿಸಲ್ಪಟ್ಟ ಪ್ರಸಂಗ . ಆ ಸಮಯದಲ್ಲಿ ಜೋಗಿಯವರು ಭೃಗು ಪಾತ್ರ ಮಾಡಿ " ಕಿರಾತ ಶ್ರೀನಿವಾಸ " ಮಾಡುತ್ತಿದ್ದರು . ಕಿರಾತ ಪಾತ್ರಕ್ಕೆ ಪ್ರಥಮ ಚಿತ್ರಣ ಕೊಟ್ಟವರೇ ಜೋಗಿಯವರು ಎಂದು ಅನೇಕ ಮಂದಿಗೆ ಇನ್ನೂ ತಿಳಿದಿಲ್ಲ .ಅಂದು ಜೋಗಿಯವರ ಕಿರಾತ , ವೇಣೂರು ಸುಂದರ ಆಚಾರ್ಯರ ಸಖನ ಪಾತ್ರ ತುಂಬಾ ಪ್ರಸಿಧ್ಧಿಯಾಗಿತ್ತು .ಶೇಣಿಯವರು " ಮಾಧವ ಭಟ್ಟ " ರ ಪಾತ್ರ ನಿರ್ವಹಿಸುತ್ತಿದ್ದರು. ಜೋಗಿಯವರ ಕಿರಾತ ಪಾತ್ರ ಅಂದು ಉತ್ತಮ ಸಾಹಿತ್ಯದೊಂದಿಗೆ , ಚುರುಕಿನ ನಾಟ್ಯದೊಂದಿಗೆ , ಪ್ರೇಕ್ಷಕರ ಮನವನ್ನು ಗೆದ್ದಿತ್ತು . ಜೋಗಿಯವರು ಸಂಗೀತದ ಜ್ಞಾನವನ್ನೂ ಹೊಂದಿ ಸುಶ್ರಾವ್ಯವಾಗಿ ಹಾಡುವ ಸಾಮರ್ಥ್ಯವನ್ನೂ ಹೊಂದಿದ್ದರು. ಆದ ಕಾರಣ ಅವರು ಅಂದು ಕಿರಾತನ ಸಂಭಾಷಣೆಯಲ್ಲಿ ಸುಶ್ರಾವ್ಯವಾಗಿ ಹಾಡಿ , ಅದನ್ನೂ ಸಂಭಾಷಣೆಯ ಭಾಗವನ್ನಾಗಿ ಸೇರಿಸಿ ಕಿರಾತ ಪಾತ್ರಕ್ಕೆ ಅದ್ಭುತವಾದ ಚಿತ್ರಣ ಕೊಟ್ಟಿದ್ದರು. ಆದರೆ , ಈಗಿನ ಕಲಾವಿದರ ಚಿತ್ರಣವೇ ಬೇರೆಯೇ ಆಗಿತ್ತು .( ಇದೂ ಚೆನ್ನಾಗಿಯೇ ಇತ್ತು . ಆದರೆ ಜೋಗಿಯವರ ಚಿತ್ರಣಕ್ಕಿಂತಲೂ ಭಿನ್ನ)
ಸುಮಾರು ೨೫ ವರ್ಷಗಳ ಬಳಿಕ ನಿನ್ನೆ ಜೋಗಿಯವರ ಕಿರಾತ ನೋಡಿದೆ. ನಾಟ್ಯವನ್ನು ಹೊರತು ಪಡಿಸಿದರೆ , ಜೋಗಿಯವರ ಕಿರಾತ ಪಾತ್ರ ಹಿಂದಿನ ಜೋಗಿಯವರನ್ನೇ ನೆನಪಿಸಿತು. ಜೋಗಿಯವರಿಗೆ ಈಗ ೭೫ ವರ್ಷ .
ಪ್ರಸ್ತು ತ ಹೊಸನಗರ ಮೇಳದ ಅತ್ಯಂತ ಹಿರಿಯ ಕಲಾವಿದ .ಆದ ಕಾರಣ ನಾಟ್ಯದಲ್ಲಿ ನಾವು ಹಿಂದಿನ ಕ್ಷಮತೆ ನಿರೀಕ್ಷಿಸಬಾರದು. ಅಂತೂ ಪಾತ್ರೋಚಿತ ಸಂಭಾಷಣೆಯಿಂದ ಮಿಂಚಿದರು. ಪದ್ಮಾವತಿಯು
" ನಿಮ್ಮನ್ನು ತಂದೆಯವರಲ್ಲಿ ಹೇಳಿ ಬಂಧಿಸುತ್ತೇನೆ " ಎಂದಾಗ ,
" ತಾನು ಹಾಗೆಲ್ಲಾ ಬಂಧನಕ್ಕೊಳಗಾಗುವವನಲ್ಲ .ತಾನು ಪ್ರೇಮಬಂಧ, ಮಧುರ ಬಂಧ, ಶಾಂತಬಂಧ , ದಾಸ್ಯಬಂಧ , ಮಿತ್ರಬಂಧ ಹಾಗೂ ಭಕ್ತಿಬಂಧಗಳೆಂಬ ಬಂಧನಕ್ಕೆ ಮಾತ್ರ ಒಳಗಾಗುವವನು "
ಎಂದು , ಅದರ ವಿವರಣೆಯನ್ನು ತಮ್ಮ ಸುಮಧುರ ಕಂಠದಿಂದ ಪದ್ಯವನ್ನು ಹಾಡಿಯೇ ರಂಜಿಸಿದರು. ಕಾಲಮಿತಿ ಪ್ರದರ್ಶನವಾದ ಕಾರಣ ಹೇಳಬೇಕಾದುದ್ದನ್ನು ಚುಟುಕಾಗಿಯೇ , ಉತ್ತಮ ಸಾಹಿತ್ಯ ರಸಪೋಷಣೆಯೊಂದಿಗೆ ಹೇಳಿದ್ದು ಮೆಚ್ಚುಗೆ ಮೂಡಿಸಿತು . ಸಖನಾಗಿ ಬಂಟ್ವಾಳ ಹಾಗೂ ಪದ್ಮಾವತಿಯಾಗಿ ಹಿಲಿಯಾಣರ ಪ್ರಸ್ತುತಿಯೂ ಆಕರ್ಷಕವಾಗಿ ಪೂರಕವಾಗಿತ್ತು .
ಅಂತೂ ೨೫ ವರ್ಷಗಳ ನಂತರ ಜೋಗಿಯವರ ಕಿರಾತ ನೋಡಿ ತೃಪ್ತನಾದೆ .
Like
Comm

" ಕೃಷ್ಣ ಸಂಧಾನ "


ಅದೊಂದು ಸಣ್ಣ ಹಳ್ಳಿ . ಊರವರೆಲ್ಲಾ ಸೇರಿ ಒಂದು ತಾಳಮದ್ದಳೆ ಮಾಡಲು ಯೋಜಿಸಿದರು. ಪ್ರಸಂಗ
" ಕೃಷ್ಣ ಸಂಧಾನ "
ಸುಪ್ರಸಿಧ್ಧ ಮೇಳದ ಕಲಾವಿದರ, ಕೌರವ, ದಿ. ಸಿಧ್ಧಕಟ್ಟೆ ಚೆನ್ನಪ್ಪ ಶೆಟ್ಟರ ಶ್ರೀಕೃಷ್ಣ ಹಾಗೂ ಸ್ತಳೀಯ ಹವ್ಯಾಸಿ ಕಲಾವಿದರ ವಿದುರ. ಚೆನ್ನಪ್ಪ ಶೆಟ್ಟರು ಆ ಕಾಲದಲ್ಲಿ ಅರ್ಥಗಾರಿಕೆಯಲ್ಲಿ
" ಸಿಧ್ಧಿ " ಹೊಂದಿದ್ದರೂ , " ಪ್ರಸಿದ್ದಿ "
ಗಳಿಸಿರಲಿಲ್ಲ.
ಕೌರವ ಪಾತ್ರಧಾರಿಯು ಆ ಕಾಲದಲ್ಲಿ ವ್ಯಂಗೋಕ್ತಿ , ವಕ್ರೋಕ್ತಿ ಹಾಗೂ ಹಾಸ್ಯಪ್ರಜ್ಞೆಗೆ ಹೆಸರಾದವರು .ವಿದುರ ಪಾತ್ರಧಾರಿಗೂ , ಕೌರವ ಪಾತ್ರಧಾರಿಗೂ , ಜಮೀನಿನ ವಿಷಯದಲ್ಲಿ ನ್ಯಾಯಾಲಯದಲ್ಲಿ ವ್ಯಾಜ್ಯವಿತ್ತು . ಆ ಹವ್ಯಾಸಿ ಕಲಾವಿದರು , ಸ್ತಳೀಯರಲ್ಲಿ ,
" ಈ ದಿನ ಆ ಕೌರವ ಪಾತ್ರಧಾರಿಯ ಮಾನ ಕಳೆಯುತ್ತೇನೆ ಹೇಗೂ ವಿದುರ ಕೌರವನಿಗೆ ನಿಂದಿಸುವ ಪ್ರಕರಣವಿದೆಯಲ್ಲಾ ? ಅದನ್ನೂ ಸೇರಿಸಿ ಮರ್ಯಾದೆ ತೆಗೆಯುತ್ತೇನೆ "
ಎಂದು ಹೇಳಿ ಬಂದಿದ್ದು , ಕೌರವ ಪಾತ್ರಧಾರಿಯ ಕಿವಿಗೂ ಬಿದ್ದಿತ್ತು .
ಅಂತೂ , ವಿದುರನು ಕೌರವನನ್ನು ನಿಂದಿಸಿ ಸಭೆಯಿಂದ ಚಪ್ಪಾಳೆ ಗಿಟ್ಟಿಸಿ
" ವಿಜಯೋತ್ಸವ " ದಿಂದ ವೇದಿಕೆಯಿಂದ ಕೆಳಗಿಳಿದು , ಸಭೆಯ , ಎದುರು ಕುಳಿತರು .
ಕೌರವ ಪಾತ್ರಧಾರಿ , ವಿದುರನಿಗೆ ಉತ್ತರವಾಗಿ ,
" ಈ ವಿದುರ ಏನೇನೋ ಮಾತಾಡಿದನಲ್ಲಾ . ಈತನಲ್ಲಿ ಒಂದು
" ಬಿಲ್ಲು " ಇತ್ತಂತೆ . ಕೆಲವರಿಗೆ ತೋರಿಸಿದ್ದಾನೆಂದೂ ನನ್ನ ಕಿವಿಗೂ ಬಿದ್ದಿತ್ತು .( ಆ ಹವ್ಯಾಸಿ ಕಲಾವಿದ ವಕೀಲರ ಬಿಲ್ಲನ್ನು ಎಲ್ಲರಿಗೂ ತೋರಿಸುತ್ತಿದ್ದನಂತೆ )
" ಕೊನೆಗೂ ಬಿಲ್ಲು ಮುರಿದು ಹೋದನಲ್ಲಾ . ಏನೂ ತೊಂದರೆಯಿಲ್ಲಾ. ಎಲ್ಲಿಯಾದರೂ , ಭೀಷ್ಮಾಚಾರ್ಯರು ನನ್ನನ್ನು ತ್ಯಜಿಸಿದರೆ , ನನ್ನ ಪೌರುಷದ ಸಂಕೇತವಾದ ಮೀಸೆ ಹೋದಂತಾಗುತ್ತಿತ್ತು . ದ್ರೋಣಾಚಾರ್ಯರೆಲ್ಲಿಯಾದರೂ , ನನ್ನನ್ನ ತ್ಯಜಿಸಿದರೆ , ನನ್ನ ಜ್ಞಾನದ ಸಂಕೇತವಾದ ಗಡ್ಡ ಹೋದಂತಾಗುತ್ತಿತ್ತು. ಎಲ್ಲಿಯಾದರೂ , ವೀರ ಕರ್ಣ ನನ್ನನ್ನು ತ್ಯಜಿಸಿದರೆ , ನನ್ನ ಶೌರ್ಯದ ಸಂಕೇತವಾದ ಎದೆಯ ರೋಮ ರಾಶಿಗಳೇ ಹೋದಂತಾಗುತ್ತಿತ್ತು .
ಆದರೂ , ಹೋದವ ವಿದುರನಲ್ಲಾ , ತೊಂದರೆಯಿಲ್ಲ , ಅದರ ಕೆಳಗಿನದು ಹೋಯಿತು , ಎಂದು ತಿಳಿಯುತ್ತೇನೆ "
ಎಂದಾಗ ಸಭೆಯಿಂದ ಭರ್ಜರಿ ಕರತಾಡನ .
ಇದಾದ , ಕೆಲವೇ ದಿನಗಳಲ್ಲಿ ಆ ಹವ್ಯಾಸಿ ಕಲಾವಿದ , ಕೌರವ ಪಾತ್ರಧಾರಿಯ ಮನೆಗೆ ಬಂದು ಜಮೀನಿನ ವ್ಯಾಜ್ಯವನ್ನು , ನ್ಯಾಯಾಲಯದ ಹೊರಗೇ ತೀರ್ಮಾನಿಸಿ , ವ್ಯಾಜ್ಯ ಹಿಂಪಡೆದರು
( ದಿ. ಚೆನ್ನಪ್ಪ ಶೆಟ್ಟರೇ , ನನ್ನಲ್ಲಿ ತಿಳಿಸಿದ ಘಟನೆಯಿದು .)
ಎಂ. ಶಾಂತರಾಮ ಕುಡ್ವ ,
ಮೂಡಬಿದಿರೆ

" ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರ "

ಮೂಡಬಿದಿರೆಯಲ್ಲಿ ಕಳೆದ ಐದು ದಿನಗಳಿಂದ ಜರಗುತ್ತಿದ್ದ , ಆಳ್ವಾಸ್ ಪ್ರತಿಷ್ಟಾನ ( ರಿ) ವತಿಯಿಂದ ಆಳ್ವಾಸ್ ಕಾಲೇಜಿನ " ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರ " ದ ವಿದ್ಯಾರ್ಥಿಗಳಿಂದ ಪ್ರಸ್ತುತ ಪಡಿಸಲ್ಪಟ್ಟ
" ಆಳ್ವಾಸ್ ಯಕ್ಷಗಾನ ಸಿರಿ " ನಿನ್ನೆ ಸಮಾಪನಗೊಂಡಿತು . ಇದರ ಬಗ್ಗೆ ಎರಡು ಮಾತು
" ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರ " ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ರೂಪಿಸಲ್ಪಟ್ಟ ಸಂಸ್ತೆ. ಅಂದು ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ HOD ಆಗಿದ್ದ ಡಾ| ಬಿ.ನಿತ್ಯಾನಂದ ಶೆಟ್ಟರ ಕನಸಿನ ಕೂಸಾದ ಈ ಸಂಸ್ತೆ , ಡಾ| ಶೆಟ್ಟರ ಅಪೇಕ್ಷೆಯಂತೆ ಯಕ್ಷಗಾನ ಪೋಷಕರು ಹಾಗೂ ಆಳ್ವಾಸ್ ಕಾಲೇಜಿನ ಅಧ್ಯಕ್ಷರಾದ
ಡಾ| ಮೋಹನ್ ಆಳ್ವರು ಎಲ್ಲಾ ವ್ಯವಸ್ತೆ ಮಾಡಿದ ಸಂಸ್ತೆಯೇ " ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರ ."
ಕಾಲೇಜಿನ ವಿದ್ಯಾರ್ಥಿಗಳಲ್ಲಿರುವ ಯಕ್ಷಗಾನದ ಅಭಿರುಚಿ ಗುರುತಿಸಿ, ಅವರಿಗೆ ಉಚಿತ ವಿದ್ಯಾಭ್ಯಾಸದೊಂದಿಗ ಉಚಿತ ವಸತಿ ಸೌಕರ್ಯವನ್ನೂ ಒದಗಿಸಿ , ಯಕ್ಷಗಾನದ ಸೇವೆಯನ್ನು ಸದ್ದಿಲ್ಲದೇ ಗೈಯುತ್ತಿರುವ ಡಾ| ಮೋಹನ ಆಳ್ವರ ದೂರಧೃಷ್ಟಿ , ಈ ಸಂಸ್ತೆಯ ಜೀವಾಳ. ರಾಜ್ಯದಾದ್ಯಂತ ನೂರಾರು ಯಕ್ಷಗಾನ ಪ್ರದರ್ಶನ ನೀಡಿದ ಈ ಸಂಸ್ತೆಯ ವಿದ್ಯಾರ್ಥಿಗಳ ಕಲಾಕೌಶಲ್ಯ ಅಭಿನಂದನೀಯ.
ಕಳೆದ ಹತ್ತು ವರ್ಷಗಳಿಂದ , ಒಂದು ವರ್ಷ ಹೊರತು ಪಡಿಸಿದರೆ , ಪ್ರತೀಸಲ ಅಂತರ್ಕಾಲೇಜು ಯಕ್ಷಗಾನ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ ಹಾಗೂ ವೈಯುಕ್ತಿಕ ಪ್ರಶಸ್ತಿಗಳನ್ನು ಪಡೆದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾದ ಆಳ್ವಾಸ್ , ಅರ್ಹವಾಗಿಯೇ ಪ್ರಶಸ್ತಿ ಗೆದ್ದಿತೆಂಬುದು ಗಮನಾರ್ಹ. ಸುಪ್ರಸಿಧ್ದ ಯಕ್ಷಗಾನ ಕಲಾವಿದರಾದ ಶೇಖರ್ ಶೆಟ್ಟಿಗಾರ್ , ಅವರ ಸೋದರ ಪ್ರೊ | ಸದಾಶಿವ ಶೆಟ್ಟಿಗಾರ್, ಪ್ರಸಾದ್ ಚೇರ್ಕಾಡಿ , ಪವನ್ ಕುಮಾರ್ ಕೆರ್ವಾಶೆ ಹಾಗೂ ಪ್ರಸ್ತುತ ಕಾಲೆಜಿನ ವಿದ್ಯಾರ್ಥಿಯಾದ ದೀವಿತ್ ಕೋಟ್ಯಾನರು ಗುರುಗಳಾಗಿ ಈ ಸಂಸ್ತೆಯ ಉನ್ನತಿಗೆ ಕಾರಣರಾಗಿದ್ದಾರೆ . ದಿ.ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ , ವಿಶ್ವನಾಥ ಶೆಟ್ಟಿ , ತಾರಾನಾಥ ವರ್ಕಾಡಿ , ಗಣೇಶ ಕೊಲೆಕಾಡಿ , ಈಶ್ವರ್ ಪ್ರಸಾದ್, ಬಲಿಪ ಶಿವಶಂಕರರಂಥಹ ಕಲಾವಿದರ ಮಾರ್ಗದರ್ಶನ ವಿದ್ಯಾರ್ಥಿಗಳಿಗೆ ದೊರೆತಿದೆ . ಇಂದು ಈ ಸಂಸ್ತೆಯ ವಿದ್ಯಾರ್ಥಿ ಕಲಾವಿದರ ಪ್ರಸ್ತುತಿಯು ವೃತ್ತಿಪರ ಕಲಾವಿದರ ಮಟ್ಟದಲ್ಲಿದೆ ಎಂದರೆ, ಖಂಡಿತವಾಗಿಯೂ ಉತ್ಪ್ರೇಕ್ಷೆಯ ಮಾತಲ್ಲ .ನಾನು ಕಳೆದ ನಾಲ್ಕು ವರ್ಷಗಳಿಂದಲೂ , ಈ ಸಂಸ್ತೆಯ ವಿದ್ಯಾರ್ಥಿಗಳ ಪ್ರದರ್ಶನ ಕಂಡು ಉದಯವಾಣಿ , ವಿಜಯಕರ್ನಾಟಕ , ಬಲ್ಲಿರೇನಯ್ಯಾ ಪತ್ರಿಕೆಗಳಲ್ಲಿ ವಿಮರ್ಶೆ ಬರೆದಾಗಲೂ ಈ ವಿಷಯವನ್ನು ಉಲ್ಲೇಖಿಸಿದ್ದೆ . ವೃತ್ತಿಪರರ ಮಟ್ಟದಲ್ಲಿ ಪ್ರದರ್ಶನ ನೀಡುತ್ತಿದ್ದ ಈ ವಿದ್ಯಾರ್ಥಿಗಳನ್ನು ಕಂಡಾಗ " ಯಕ್ಷಗಾನಕ್ಕೆ ಅಳಿವಿಲ್ಲ " ಎಂದೇ ಬರೆದಿದ್ದೆ . ಸ್ವತಃ ಕಲಾವಿದರಾದ ಡಾ| ಆಳ್ವರು ಯಕ್ಷಗಾನಕ್ಕೆ ನೀಡುತ್ತಿರುವ ಪ್ರೋತ್ಸಾಹವನ್ನು ಮೆಚ್ಚಲೇಬೇಕು. ಈ ಸಂಸ್ತೆಯಲ್ಲಿ ಕಲಿತ, ಯಕ್ಷಗಾನದಲ್ಲಿ ಸಕ್ರಿಯರಾದ ವಿದ್ಯಾರ್ಥಿಗಳು, ಇಂದು ಯಕ್ಷರಂಗದಲ್ಲಿ ಮಿಂಚುತ್ತಿದ್ದಾರೆ. ರಾಹುಲ್ ಶೆಟ್ಟಿ , ಕಟೀಲು ಮೇಳದ ಕಲಾವಿದರಾದೆರೆ , ಪ್ರಸಾದ್ ಚೇರ್ಕಾಡಿಯವರು, ಚಲನಚಿತ್ರ, ಧಾರಾವಾಹಿ , ನಾಟಕ ಹಾಗೂ ಯಕ್ಷಗಾನೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಪ್ರಸಿಧ್ಧರಾಗಿದ್ದಾರೆ. ಸುಧಾಕರ್ ಜೈನ್ ರವರು ಪತ್ರಕರ್ತರಾಗಿದ್ದುಕೊಂಡು ರಾಜ್ಯದ ರಾಜಧಾನಿಯಾದ ಬೆಂಗಳೂರಲ್ಲಿ ಯಕ್ಷಗಾನ , ತಾಳಮದ್ದಳೆಯ ಕಂಪನ್ನು " ಧೀಂಗಿಣ " ದ ಮೂಲಕ ಹರಡಿಸುತ್ತಿದ್ದಾರೆ. ಪವನ್ ಕುಮಾರ್, ಪ್ರಜ್ವಲ್ ಪೆಜತ್ತಾಯ, ಶರತ್ ಕುಮಾರ್ ಮುಂತಾದವರು ಈಗಲೂ ವೃತ್ತಿಯೊಂದಿಗೆ, ಪ್ರವೃತ್ತಿಯಲ್ಲಿ ಯಕ್ಷಗಾನೀಯ ಚಟುವಟಿಕೆಯಲ್ಲಿದ್ದಾರೆ.
ನಿನ್ನೆಯ " ಶ್ರೀದೇವಿ ಕದಂಬ ಕೌಶಿಕೆ "
ಪ್ರದರ್ಶನವನ್ನು ಶ್ರೇಷ್ಟ ಮಟ್ಟದಲ್ಲಿ ಈ ಸಂಸ್ತೆಯ ವಿದ್ಯಾರ್ಥಿಗಳು , ಸಾವಿರಾರು ಪ್ರೇಕ್ಷಕರ ಸಮ್ಮುಖದಲ್ಲಿ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದರು. " ಶ್ರೀದೇವಿ ಮಹಾತ್ಮೆ " ಪ್ರಸಂಗದ ಭಾಗವಾದ ಈ ಪ್ರಸಂಗದ ಪ್ರದರ್ಶನ ಸುಲಭದ ಕೆಲಸವಲ್ಲ . ವಿಭಿನ್ನ ಸ್ವಭಾವದ, ನವರಸಗಳನ್ನೊಳಗೊಂಡ ಈ ಕಥಾಭಾಗ ಪ್ರದರ್ಶಿಸುವದೆಂದರೆ , ವೃತ್ತಿಪರ ಕಲಾವಿದರಿಗೂ ಒಂದು ಸವಾಲೇ ಎಂದರೆ ತಪ್ಪಾಗಲಿಕ್ಕಿಲ್ಲ . ಶುಂಭನಿಶುಂಭರ ವೀರರಸ , ಚಂಡಮುಂಡರ ಶ್ರಂಗಾರ , ರಕ್ತಬೀಜನ ಶಾಂತ ಹಾಗೂ ಭಯಾನಕ , ಸುಗ್ರೀವನಲ್ಲಿರುವ ಕರುಣರಸ, ಕಾಳಿಯ ಬೀಭತ್ಸ , ಪಾತ್ರಿಯ ಹಾಸ್ಯ ಹಾಗೂ ಶ್ರೀದೇವಿಯ ಅದ್ಭುತ , ರುದ್ರ ರಸಗಳ ಪೂರಣ ಈ ಪ್ರಸಂಗದಲ್ಲಿದೆ . ಆದರೂ , ಈ ವಿದ್ಯಾರ್ಥಿಗಳು, ತಮ್ಮ ಈ ಪ್ರಸಂಗದ ಪ್ರಥಮ ಪ್ರದರ್ಶನದಲ್ಲೇ ಯಶಸ್ವಿಯಾದರು. ಬಣ್ಣದ ವೇಷದಲ್ಲಿ ಶುಂಭನಾಗಿ ಸಚಿನ್ ಅಮೀನರ ನಿರ್ವಹಣೆ ಅತ್ಯುತ್ತಮವಾಗಿತ್ತು.ಸಾತ್ವಿಕರ ನಿಶುಂಭನ ಪಾತ್ರ ಸಹಾ ಪೂರಕವಾಗಿತ್ತು .ಚಂಡಮುಂಡರಾಗಿ ಶಿವರಾಜ್ ಹಾಗು ಅಕ್ಷಯ್ ಮೂಡಬಿದಿರೆ ವೃತ್ತಿಪರರಂತೇ ರಂಗಸ್ತಳ ಹುಡಿ ಮಾಡಿದರು. ದೇವೇಂದ್ರನ ಪಾತ್ರದಲ್ಲಿ ಸಂತೋಷ್ ಗೋಖಲೆ ಉತ್ತಮ ಮಾತುಗಾರಿಕೆ, ಭಾವಭಿನಯದಿಂದ ಗಮನ ಸೆಳೆದರು . ಧೂಮ್ರಾಕ್ಷನ ಪಾತ್ರದಲ್ಲಿ ಜಯಕೀರ್ತಿ ಜೈನ್ ಚಿಕ್ಕ ಪಾತ್ರವಾದರೂ ಚೊಕ್ಕವಾಗಿ ನಿರ್ವಹಿಸಿದರು. ರಕ್ತಬೀಜನಾಗಿ ಅಭಿಜಿತ್ ರಾವ್ ನ ನಿರ್ವಹಣೆ ಶ್ರೇಷ್ಟ ಮಟ್ಟದಲ್ಲಿತ್ತು . ಮಾತುಗಾರಿಕೆ , ನಾಟ್ಯ, ಬಣ್ಣಗಾರಿಕೆ ಎಲ್ಲದರಲ್ಲೂ ಹವ್ಯಾಸಿಯೆಂದು ಎಣಿಸಲಾಗದಷ್ಟು ವೃತ್ತಿಪರರಂತೇ , ಪ್ರಸ್ತುತಪಡಿಸಿದರು. ಸುಗ್ರೀವ ಹಾಗೂ ಪಾತ್ರಿಯಾಗಿ ಆದಿತ್ಯ ಭಟ್ ಮಿಂಚಿದರು. ಶ್ರೀದೇವಿಯಾಗಿ ದಿವಿತ್ ಕೋಟ್ಯಾನರ ನಿರ್ವಹಣೆ ಮೆಚ್ಚಲೇಬೇಕು. ಶ್ರೀದೇವಿಯ ಗಾಂಭೀರ್ಯ, ದೇವತೆಗಳ ಮೇಲಿನ ಕರುಣೆ , ರಾಕ್ಷಸರ ಮೇಲಿರುವ ಕೋಪ ಎಲ್ಲವನ್ನೂ ಚೆನ್ನಾಗಿ ನಿರ್ವಹಿಸಿದರು.ದಿವಿತ್ ಒಬ್ಬ ಶ್ರೇಷ್ಟ ಕಲಾವಿದ ಎಂಬುದರಲ್ಲಿ ಎರಡು ಮಾತಿಲ್ಲ .
ಹಿಮ್ಮೇಳದಲ್ಲಿ ಭಾಗವತರನ್ನು ಹೊರತು ಪಡಿಸಿದರೆ ಉಳಿದವರೆಲ್ಲರೂ ಕಾಲೇಜಿನ ವಿದ್ಯಾರ್ಥಿಗಳೇ ಎಂಬುದು ವಿಶೇಷ. ಭಾಗವತರಾಗಿ ಕಾಲೇಜಿನ ಹಳೆವಿದ್ಯಾರ್ಥಿ ಪ್ರಸಾದ್ ಚೇರ್ಕಾಡಿ ಹಾಗೂ ಶಿವಶಂಕರ ಬಲಿಪರು , ಮದ್ದಳೆಯಲ್ಲಿ ನಿಖಿಲ್ ಪೈ, ಸಹಕರಿಸಿದರು . ಚೆಂಡೆವಾದನದಲ್ಲಿ ದಿವ್ಯಾಶ್ರೀ ನಾಯಕ್ ರವರ ಕೈ ಚಳಕ ಎದ್ದು ಕಾಣುತ್ತಿತ್ತು. ಮಯೂರ್ ನಾಯ್ಗ ಹಾಗೂ ಸವಿನಯರೂ ಮಿಂಚಿದರು. ಅಂತೂ ವೃತ್ತಿಪರರ ಮಟ್ಟದಲ್ಲಿ ವಿದ್ಯಾರ್ಥಿಗಳು ನೀಡಿದ ಪ್ರದರ್ಶನ ಮುದ ನೀಡಿತು. ಮಕ್ಕಳಿಗೆ ನಾಟ್ಯಾಭ್ಯಾಸ ಹಾಗೂ ನಿರ್ದೇಶನ ನೀಡಿದ , ಅದೇ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಯಾದ ದಿವೀತ್ ಕೋಟ್ಯಾನ್ ರವರ ಬಿಗು ನಿರ್ದೇಶನ ಪ್ರದರ್ಶನದುದ್ದಕ್ಕೂ ಎದ್ದು ಕಾಣುತ್ತಿತ್ತು . ದೂರದ ದುಬಾಯಿಯಲ್ಲಿದ್ದುಕೊಂಡೇ ಶೇಖರ ಶೆಟ್ಟಿಗಾರರು ಬರೆದ ಸಂಭಾಷಣೆ ಅತ್ಯುತ್ತಮವಾಗಿತ್ತು .
ವಿದ್ಯಾರ್ಥಿಗಳಲ್ಲಿ ಯಕ್ಷಗಾನದ ಆಸಕ್ತಿ ಮೂಡಿಸುವ ಡಾ| ಆಳ್ವರ ಪ್ರಯತ್ನ ನಿಜವಾಗಿಯೂ ಕಾಲೋಚಿತ ಹಾಗೂ ಕಲೋಚಿತ. ದಿವೀತ್ ಕೋಟ್ಯಾನರ ನಿರ್ದೇಶನದಲ್ಲಿ ವಿದ್ಯಾರ್ಥಿಗಳು ಇನ್ನಷ್ಟು ಉತ್ತಮ ಪ್ರದರ್ಶನ ನೀಡಲಿ ಎಂದು ಶುಭ ಹಾರೈಸುತ್ತೇನೆ .
ಎಂ. ಶಾಂತರಾಮ ಕುಡ್ವ
ಮೂಡಬಿದಿರೆ